ಕಠಾರಿವೀರನಿಗೆ ದಾರಿಬಿಟ್ಟುಕೊಟ್ಟ ಗಾಡ್ಫಾದರ್
'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಜೊತೆ ಇಷ್ಟು ದಿನ ಫೈಟ್ ಮಾಡುತ್ತಾ ಬಂದಿದ್ದ ನಿರ್ಮಾಪಕ ಕೆ ಮಂಜು ಈಗ ತಮ್ಮ 'ಗಾಡ್ಫಾದರ್' ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ವರು 'ಕಠಾರಿವೀರ' ಹಾಗೂ 'ಗಾಡ್ಫಾದರ್' ಬಿಡುಗಡೆ ವಿವಾದಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ (ಮೇ 5) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕೆ ಮಂಜು, ತಮ್ಮ 'ಗಾಡ್ಫಾದರ್' ಚಿತ್ರವನ್ನು ಜೂನ್ 8 ಅಥವಾ ಜೂನ್ 15ಕ್ಕೆ ಬಿಡುಗಡೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸೂಕ್ತ ಸಮಯ ನೋಡಿ ತಮ್ಮ 'ಗಾಡ್ಫಾದರ್' ಚಿತ್ರವನ್ನು ಸೆನ್ಸಾರ್ಗೆ ಕಳುಹಿಸುವುದಾಗಿಯೂ ಅವರು ಹೇಳಿದರು.
ಚಿತ್ರರಂಗದ ಹಿತದೃಷ್ಟಿಯಿಂದ ತಮ್ಮ ಚಿತ್ರವನ್ನು ಮುಂದೂಡಿ 'ಕಠಾರಿವೀರ' ಚಿತ್ರಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. 'ಕಠಾರಿವೀರ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡು 100 ದಿನ ಪೂರೈಸಲಿ ಎಂದು ಹಾರೈಸಿದರು. ಈ ಮೂಲಕ ಎರಡು ಬಿಗ್ ಬಜೆಟ್ ಚಿತ್ರಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆಬಿದ್ದಂತಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications