ಚಿಂಗಾರಿ ವೇದಿಕೆಯಲ್ಲಿ ದರ್ಶನ್ ಬಗ್ಗೆ ಸುದೀಪ್ ಮಾತು
ಇತ್ತೀಚಿಗೆ ಬಿಡುಗಡೆಯಾದ 'ಚಿಂಗಾರಿ' ಚಿತ್ರದ ಆಡಿಯೋ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಸುದೀಪ್ ಬಂದಿದ್ದರು. ದರ್ಶನ್ ಪಕ್ಕ ಸುದೀಪ್ ಬಂದು ಕುಳಿತಾಗ ಸಹಜವಾಗಿಯೇ ಸೇರಿದ್ದ ಜನರಿಗೆ ಆಶ್ಚರ್ಯ ಹಾಗೂ ಖುಷಿ ಒಟ್ಟಿಗೆ ಆಯ್ತು. ಕಾರಣ ಒಂದೇ ವೇಳೆಯಲ್ಲಿ ಚಿತ್ರರಂಗಕ್ಕೆ ಬಂದು ಪ್ರತಿಸ್ಪರ್ಧಿಗಳಂತೆ ಬೆಳೆದವರು. ಒಟ್ಟಗೆ ವೇದಿಕೆ ಹಂಚಿಕೊಂಡಿದ್ದು ತೀರಾ ಕಡಿಮೆ.
ಆದರೆ ಅಂದು ಸುದೀಪ್ ಮನಬಿಚ್ಚಿ ಮಾತನಾಡಿದರು. ದರ್ಶನ್ ಚಿತ್ರ ಸಾರಥಿಯನ್ನು ಮೆಚ್ಚಿಕೊಂಡಿದ್ದಲ್ಲದೇ ಚಿತ್ರರಂಗಕ್ಕೆ ಸರಿಯಾದ ವೇಳೆಯಲ್ಲಿ ಸಾರಥಿ ಅಗತ್ಯವಿದ್ದ ಗೆಲುವಿನ 'ಕೊಡುಗೆ' ನೀಡಿದೆ ಅಂದರು. ದರ್ಶನ್ ವೈಯಕ್ತಿಕ ಜೀವನದಲ್ಲಿ ನಡೆದ 'ಜೈಲು ದರ್ಶನ' ಘಟನೆಯ ಬಗ್ಗೆ ಸಂಕ್ಷಿಪ್ತ ಹಾಗೂ ನೇರವಾಗಿ ಅವರಾಡಿದ ಮಾತನ್ನು ಎಲ್ಲರೂ ಮೆಚ್ಚಿಕೊಂಡರು.
ದರ್ಶನ್ ತಮ್ಮ ಗೆಳೆಯ ಎಂದ ಸುದೀಪ್ "ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ಕೆಲವರು ಮಾತ್ರ ಸಿಕ್ಕಿಹಾಕಿಕೊಳ್ಳುತ್ತಾರೆ" ಎಂದರು. ಆ ಮಾತನ್ನು ವೇದಿಕೆಯಲ್ಲಿ ಇದ್ದವರೆಲ್ಲಾ ಅನುಮೋದಿಸಿ ತಲೆ ಅಲ್ಲಾಡಿಸಿದ್ದು ಕಂಡುಬಂತು. ಚಿಂಗಾರಿಗೆ ಯಶಸ್ಸನ್ನು ಕೋರಿ ಮಾತು ಮುಗಿಸಿದರು ಸುದೀಪ್. ದರ್ಶನ್ ಕೂಡ ತಮಗೆ ಸುದೀಪ್ ಒಳ್ಳೆಯ ಗೆಳೆಯ ಅಂದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











