ಸಂತ್ರಸ್ತರ ನೋವಿಗೆ ಸ್ಪಂದಿಸಿದ ಕನ್ನಡಚಿತ್ರೋದ್ಯಮ
ಕರ್ನಾಟಕ ಹಿಂದೆಂದೂ ಕಂಡರಿಯದ ಜಲಪ್ರಳಯಕ್ಕೆ ತುತ್ತಾಗಿದೆ. ಭೀಕರ ಮಳೆ ತಂದ ಅನಾಹುತ ಕರ್ನಾಟಕದ 18 ಜಿಲ್ಲೆಗಳ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಸಂಘ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ದಾನಿಗಳು ಉದಾರ ಮನಸ್ಸಿನಿಂದ ಸಹಾಯ ಹಸ್ತ ಚಾಚಿದ್ದಾರೆ. ಸಂತ್ರಸ್ತರಿಗೆ ನೆರವಾಗಲು ಕನ್ನಡ ಚಿತ್ರೋದ್ಯಮ ಕೆಲವು ಮಂದಿ ಉದಾರ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ.
ಕನ್ನಡ ಚಿತ್ರೋದ್ಯಮದ ಹೊಸ ನಿರ್ಮಾಪಕಿ ಪ್ರಿಯಾ ದರ್ಶನ್ ಅವರು ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸೋಮವಾರ ರು.51,000 ಚೆಕ್ ವಿತರಿಸಿದರು. 'ಹೃದಯದಲಿ ಇದೇನಿದು' ಚಿತ್ರದ ಮೂಲಕ ಅವರು ಇದೇ ಮೊದಲ ಬಾರಿ ನಿರ್ಮಾಪಕಿಯಾಗಿ ಬದಲಾಗುತ್ತಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯಲ್ಲೇ ಅವರು ಪರಿಹಾರದ ಚೆಕ್ ವಿತರಿಸಿದರು.
'ರಾಜ್ ದಿ ಶೋಮ್ಯಾನ್' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶ್ರಿನಿವಾಸ ಮೂರ್ತಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರು.1 ಲಕ್ಷ ಹಣ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಸಹ ಡಾ.ರಾಜ್ ಕುಮಾರ್ ಟ್ರಸ್ಟ್ ಮೂಲಕ ಪರಿಹಾರ ನೀಡಲು ಮುಂದಾಗಿದ್ದಾರೆ. ಈ ಕುರಿತು ಮಾತನಾಡಿದ ಪುನೀತ್, ನೆರೆ ಸಂತ್ರಸ್ತರ ಕಷ್ಟಕ್ಕೆ ಮರುಗಿದರು.ಸಂತ್ರಸ್ತರಿಗೆ ನೆರವಾಗಲು ತಮ್ಮ ಕೈಲಾದ ಸಹಾಯ ಮಾಡಿ ಎಂದು ಪ್ರತಿಯೊಬ್ಬರನ್ನು ಭೇಟಿ ಮಾಡುತ್ತೇನೆ ಎಂದರು.
ನೆರೆ ಸಂತ್ರಸ್ತರಿಗೆ ನೆರವಾಗಲು ಸಿನಿಮಾ ಉದ್ಯಮ ಮುಂದಾಗಿದೆ. ಜಯಮಾಲಾ ಅಧ್ಯಕ್ಷತೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ 6 ನಿರ್ಧಾರಗಳನ್ನುತೆಗೆದುಕೊಳ್ಳಲಾಯಿತು.
ಚಿತ್ರಮಂದಿರ ಮಾಲೀಕರು ಒಂದು ದಿನದ ಕಲೆಕ್ಷನ್ ,ಚೇಂಬರ್ ಹಾಗೂ ಕಲಾವಿದ ಸಂಘದವತಿಯಿಂದ 25 ಲಕ್ಷ , ನಿಧಿ ಸಂಗ್ರಹಣೆಗೆ ರೋಡ್ ಶೋ, ಕಲಾವಿದರು ಹಾಗೂ ಕಾರ್ಮಿಕರೆಲ್ಲಾ ಸೇರಿ, ಟಿವಿ ಹಾಗೂರಿಯಾಲಿಟಿ ಶೋಗಳನ್ನು ಮಾಡುವ ಮೂಲಕ ನಿಧಿ ಸಂಗ್ರಹಿಸುವುದು, ಎನ್.ಜಿ.ಒಗಳ ಸಂಪರ್ಕದೊಂದಿಗೆ ಆಹಾರ ಧಾನ್ಯ, ಮೂಲ ಸೌಲಭ್ಯ ಕೊಡಿಸುವುದು, ನೆರೆ ಪೀಡಿತ ಜಿಲ್ಲೆಗಳಿಗೆ ತೆರಳಿ ಧೈರ್ಯ ಹೇಳುವ ನಿರ್ಣಯ ತೆಗದುಕೊಳ್ಳಲಾಗಿದೆ.
ಮಂಗಳವಾರ ಮತ್ತೆಸಭೆ ಕರೆಯಲಾಗಿದ್ದು, ಕಲಾವಿದರ ಸಂಘದಅಧ್ಯಕ್ಷ ಅಂಬರೀಷ್ ಹಾಗೂ ಒಕ್ಕೂಟದ ಅಧ್ಯಕ್ಷ ಅಶೋಕ್ರನ್ನು ಆಹ್ವಾನಿಸಲಾಗಿದೆ. ಚಿತ್ರರಂಗದ ಸಹಾಯಹಸ್ತ ನಿರಾಶ್ರಿತರಿಗೆ ಮನೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಕೆಲವು ನಿರಾಶ್ರಿತ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪ್ರಕಟಿಸಿದ್ದಾರೆ.
ರಾಜ್ ಕುಮಾರ್ ಕುಟುಂಬವು ರಾಜ್ಕುಮಾರ್ ಟ್ರಸ್ಟ್ ನಿಂದ ಸಂತ್ರಸ್ತರ ಕುಟುಂಬಕ್ಕೆ 5ಲಕ್ಷ ರೂ. ನಗದನ್ನು ಮಂಗಳವಾರ ನೀಡಲಿದ್ದಾರೆ. ಮಾಜಿ ಸಂಸದ ಅಂಬರೀಷ್ 5 ಲಕ್ಷ ಹಾಗೂ ಜಗ್ಗೇಶ್, 'ರಾಜ್" ಚಿತ್ರದ ನಿರ್ಮಾಪಕ, ನಿರ್ಮಾಪಕ ಎನ್.ಕುಮಾರ್ ತಲಾ ಒಂದು ಲಕ್ಷ ರೂ. ಘೋಷಿಸಿದ್ದಾರೆ. ಜಗ್ಗೇಶ್ ಮಂತ್ರಾಲಯದ ರಾಯರಪೂಜೆಗೆ ಹಸು ದಾನ ನೀಡಲು ಮುಂದಾಗಿದ್ದಾರೆ.
ನಟಿ ತಾರಾ,ನಟ ಶ್ರೀನಿವಾಸಮೂರ್ತಿ ಪರಿಹಾರ ಸಂಗ್ರಹಕ್ಕೆಮಂಗಳವಾರ ರೋಡ್ ಶೋ ನಡೆಲಿದ್ದಾರೆ. ಸಚಿವ ಅಶೋಕ್, ಸಂಸದ ಪಿ.ಸಿ. ಮೋಹನ್ ಮತ್ತಿತರರು ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ದಿನಬಳಕೆ ವಸ್ತುಗಳನ್ನು ಸೋಮವಾರ ಸಂಗ್ರಹಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











