ಪೋಷಕ ನಟಿಗೆ ಸಂದ ಗೌರವ:ಉಮಾಶ್ರೀ
'ಗುಲಾಬಿ ಟಾಕೀಸ್' ಚಿತ್ರದಲ್ಲಿನ ಮನೋಜ್ಞ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಬಂದಿರುವ ಬಗ್ಗೆ ನಟಿ ಉಮಾಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ. ದೂರವಾಣಿ ಮೂಲಕ ಮೈಸೂರಿನಿಂದ ದಟ್ಸ್ ಕನ್ನಡಕ್ಕೆ ಪ್ರತಿಕ್ರಿಯಿಸಿರುವ ಅವರು, ಇದುವರೆಗೂ ತಮಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಆದರೆ ಬಹಳ ದಿನಗಳ ನಂತರ ರಾಷ್ಟ್ರಪ್ರಶಸ್ತಿ ಸಿಗುತ್ತಿರುವುದು ಖುಷಿ ಕೊಟ್ಟಿದೆ ಎಂದರು.
ತಮ್ಮನ್ನು ಇಷ್ಟು ದಿನ ರಂಗಭೂಮಿ ಕಲಾವಿದೆ , ಪೋಷಕ ನಟಿ ಎಂದು ಗುರುತಿಸುತ್ತಿದ್ದರು. ಇದೀಗ ರಾಷ್ಟ್ರ ಪ್ರಶಸ್ತಿ ಬಂದು ತಾವೂ ಅಭಿನೇತ್ರಿ ಎಂಬುದು ಸಾಬೀತಾಗಿದೆ ಎಂದರು. ಪ್ರಶಸ್ತಿ ಪಡೆಯುವ ಸಲುವಾಗಿಯೇ ತಾನು ಎಂದೂ ಅಭಿನಯಿಸಿದ್ದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು. 2007-08ನೇ ಸಾಲಿನಲ್ಲಿ 'ಗುಲಾಬಿ ಟಾಕೀಸ್' ಚಿತ್ರದ ಅತ್ಯುತ್ತಮ ನಟನೆಗಾಗಿ ರಾಜ್ಯ ಪ್ರಶಸ್ತಿ ಬಂದಿತ್ತು. ಇದೀಗ ರಾಷ್ಟ್ರ ಪ್ರಶಸ್ತಿ ಬಂದಿರುವುದು ಜಬಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಕಾಸರವಳ್ಳಿ ಅವರಂತ ಪ್ರತಿಭಾವಂತ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದು ಎಂಥವರಿಗಾದರೂ ಹೆಮ್ಮೆಯ ವಿಷಯ. ಗುಲಾಬಿ ಟಾಕೀಸ್ ಚಿತ್ರದಲ್ಲಿನ ಪಾತ್ರ ನನಗೆ ತುಂಬ ಖುಷಿ ಕೊಟ್ಟಿದೆ. ಕಾಸರವಳ್ಳಿ ಅವರ ಮುಂಬರುವ ಚಿತ್ರಗಳಲ್ಲೂ ನಟಿಸುವ ಆಸೆಯನ್ನು ಉಮಾಶ್ರೀ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











