ಹರೀಶ್ ರಾಜ್ ಆತ್ಮಹತ್ಯೆ ಘಟನೆ ಮರುಕಳಿಸದಿರಲಿ
ಚಿತ್ರಮಂದಿರ ಸಮಸ್ಯೆ ಇತ್ತೀಚೆಗೆ ಕನ್ನಡ ಚಿತ್ರನಿರ್ಮಾಪಕರ ಕುತ್ತಿಗೆ ಕುಯ್ಯುವ ಕೆಲಸ ಮಾಡುತ್ತಿದೆ. ಸಿನಿಮಾ ಚೆನ್ನಾಗಿದ್ದರೂ ಅದನ್ನು ಜನಕ್ಕೆ ಮುಟ್ಟಿಸುವ ಕೆಲಸ ಆಗುತ್ತಿಲ್ಲ. ವಾರಕ್ಕೆ ಮೂರು, ನಾಲ್ಕು ಚಿತ್ರಗಳು ತೆರೆಕಂಡು ಅದರಲ್ಲಿ ಒಂದೋ ಎರಡೋ ಚಿತ್ರ ಚಿನ್ನಾಗಿದ್ದರೂ ಅದು ಪ್ರೇಕ್ಷಕರನ್ನು ತಲುಪುವಲ್ಲಿ ಸೋಲುತ್ತಿದೆ!
ಮೊನ್ನೆ ನಟ, ನಿರ್ದೇಶಕ ಹರೀಶ್ರಾಜ್ ಆತ್ಮಹತ್ಯೆಗೆ ಯತ್ನಿಸಿರುವ ಸುದ್ದಿ ನಿಮಗೂ ಗೊತ್ತಿರಬಹುದು. ಹೀಗೆ ಹರೀಶ್ ಥರ ಪರದಾಡುವ ಮಂದಿ ಅದೆಷ್ಟೊ ಇದ್ದಾರೆ. ಆದರೆ, ಅದು ಬೆಳಕಿಗೆ ಬರುವುದಿಲ್ಲ. ಕೆಲವರು ಮರ್ಯಾದಿಗೆ ಅಂಜಿ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುತ್ತಾರೆ, ಅಷ್ಟೇ!
ಒಂದು ಚಿತ್ರದ ನಂತರ ಇನ್ನೊಂದು ಸಾಲಾಗಿ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಫಿಲಂ ಛೇಂಬರ್ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆಯಾದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅದಕ್ಕೆ ಸಂಬಂಧಿಸಿದಂತೇ ಸ್ಕ್ರೀನಿಂಗ್ ಕಮೀಟಿ ಮಾಡುತ್ತೇವೆ ಎಂದು ಚಿತ್ರೋದ್ಯಮದ ಕೆಲ ಗಣ್ಯರು ನಿರ್ಮಾಪಕರು ಬಾಯಲ್ಲಿ ಬ್ರಹ್ಮಾಂಡ ತೋರಿಸುತ್ತಲೇ ಇದ್ದಾರೆ. ಇತ್ತ ಬಸಂತ್ ಕುಮಾರ್ ಪಾಟೀಲ್ ಮಾತೆತ್ತಿದರೆ ಚಿತ್ರೋದ್ಯಮಕ್ಕೆ ರಜೆ ಘೋಷಣೆ ಎಂದು ಅನೌನ್ಸ್ ಮಾಡುತ್ತಲೇ ಇರುತ್ತಾರೆ ಎಂದು ಗಾಂಧೀನಗರದ ಕೆಲವರು ಬೇಸರ ಮಾಡಿಕೊಳ್ಳುತ್ತಿದ್ದಾರೆ.
ಇದೇ ಥರ ತಿಂಗಳ ಹಿಂದೆ ನಟಿ, ನಿರ್ದೇಶಕಿ ತಮ್ಮ 'ಬಿಂದಾಸ್ ಹುಡುಗಿ' ಚಿತ್ರವನ್ನು ಭೂಮಿಕಾ ಚಿತ್ರಮಂದಿರದಿಂದ ಎತ್ತಂಗಡಿ ಮಾಡುತ್ತಿದ್ದಾರೆ ಎಂದು ಎದೆ ಎದೆ ಬಡಿದುಕೊಂಡಿದ್ದರು. ರವಿಚಂದ್ರನ್ ಅವರ 'ನಾರಿಯಾ ಸೀರೆ ಕದ್ದಾ' ಚಿತ್ರವನ್ನು ಭೂಮಿಕಾದಲ್ಲಿ ಹಾಕಲು 'ಬಿಂದಾಸ್ ಹುಡುಗಿ'ಯನ್ನು ಎತ್ತಂಗಡಿ ಮಾಡುವ ಪ್ಲ್ಯಾನ್ ನಡೆದಿತ್ತು.
ಅದೇ ರೀತಿ 'ಮೈಲಾರಿ' ಚಿತ್ರವನ್ನು ನರ್ತಕಿ ಮತ್ತು ಒಂದಷ್ಟು ಬೆಂಗಳೂರಿನ ಚಿತ್ರಮಂದಿರದಿಂದ ಎತ್ತಿಹಾಕಬೇಕು ಎಂದು ಒಂದಷ್ಟು ಕಾಣದ ಕೈಗಳು ಪಿತೂರಿ ನಡೆಸಿದ್ದವು. ಕೊನೆಗೆ ಶಿವಣ್ಣ ಮತ್ತು ಅವರ ಅಭಿಮಾನಿ ಸಂಘದವರು ತಿರುಗಿಬಿದ್ದರು. 'ಮೈಲಾರಿ'ಯನ್ನು ಹಿಡಿದು ನಿಲ್ಲಿಸಿದರು! ಆದರೆ, ಪ್ರಿಯಾಹಾಸನ್, ಹರೀಶ್ರಾಜ್ ಅಂಥವರಿಗೆ ಬೆನ್ನೆಲುಬಾಗಿ ನಿಲ್ಲಲು ಯಾರೂ ಇಲ್ಲ. ಹೀಗಾಗಿ ಆತ್ಮಹತ್ಯೆ ಅಥವಾ ಎದೆ ಎದೆ ಬಡಿದುಕೊಳ್ಳುವುದೊಂದೇ ಮಾರ್ಗ!ಇದು ಗಾಂಧಿನಗರದ ಇನ್ನೊಂದು ಮುಖ... ನಿಮಗೂ ಇದು ಗೊತ್ತಿರಲಿ!


Click it and Unblock the Notifications











