ಪ್ರಶಸ್ತಿ ಪುರಸ್ಕೃತರಿಗೆ ವಾಣಿಜ್ಯ ಮಂಡಳಿ ಸನ್ಮಾನ
ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ(ಮಾ.9) ಬೆಂಗಳೂರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಸನ್ಮಾನಿಸಲಿದೆ. ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಾರಿಗೆ ಸಚಿವ ಆರ್ ಅಶೋಕ್ ಅವರು ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಸಂಸ್ಕೃತಿ ಮತ್ತು ಮಾಹಿತಿ ಇಲಾಖೆ ಕಾರ್ಯದರ್ಶಿ ಬಿ ಆರ್ ಜಯರಾಮರಾಜೇ ಅರಸ್ ಹಾಗೂ ಮಾಹಿತಿ ನಿರ್ದೇಶಕ ವಿಶುಕುಮಾರ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ ಕೆ ಮೂರ್ತಿ, ಪದ್ಮಶ್ರೀ ಪ್ರಶಸ್ತಿ ಪಡೆದ ಅರುಂಧತಿ ನಾಗ್, ವಿ ಶಾಂತರಾಂ ಪ್ರಶಸ್ತಿ ಪುರಸ್ಕೃತ ಎಂ ವಿ ಕೃಷ್ಣಸ್ವಾಮಿ ಹಾಗೂ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಮುಖ್ಯಮಂತ್ರಿ ಚಂದ್ರು, ಭಾರತಿ ವಿಷ್ಣುವರ್ಧನ್ ಹಾಗೂ ಮೇಲ್ಮನೆಗೆ ಆಯ್ಕೆಯಾಗಿರುವ ಸಂದೇಶ್ ನಾಗರಾಜ್, ಇ ಕೃಷ್ಣಪ್ಪ ಮತ್ತು ಜಗ್ಗೇಶ್ ಅವರನ್ನು ಸನ್ಮಾನಿಸಲಾಗುತ್ತದೆ.
ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ವಿಮುಕ್ತಿ' ಚಿತ್ರದ ನಿರ್ದೇಶಕ ಪಿ ಶೇಷಾದ್ರಿ ಮತ್ತು ನಿರ್ಮಾಪಕ ನವ್ಯ ಚಂದ್ರ ಹಾಗೂ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆ 'ಗುಬ್ಬಚ್ಚಿಗಳು' ನಿರ್ದೇಶಕ ಅಭಯ ಸಿಂಹ ಹಾಗೂ ನಿರ್ಮಾಪಕಿ ಶೈಲಜಾ ಸುರೇಶ್; ಅತ್ಯುತ್ತಮ ಪ್ರಾದೇಶಿಕ ತುಳು ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ'ನಿರ್ದೇಶಕ ಶಿವಧ್ವಜ್ ಹಾಗೂ ಹಿರಿಯ ಚಿತ್ರ ವಿತರಕ ಕೆ ವಿ ಗುಪ್ತ ಅವರನ್ನು ಸನ್ಮಾನಿಸಲಾಗುತ್ತದೆ.


Click it and Unblock the Notifications











