ಬೆಳ್ಳಿತೆರೆಗೆ "ಪ್ರವಾದಿ"ಯಾಗಿ ಶಂಕರನಾಗ್ !!
ದಿವಂಗತ ಶಂಕರನಾಗ್ ಅವರು ಈಗ ಮತ್ತೆ ಬೆಳ್ಳಿತೆರೆಗೆ ಬಂದರೆ ಹೇಗೆ? ಅವರ ಅಭಿಮಾನಿಗಳಿಗೆ ಇದಕ್ಕಿಂತಲೂ ಸೌಭಾಗ್ಯ ಇನ್ನೇನಿದೆ ಅಲ್ಲವೆ? ಹೌದು ಅವರು 'ಪ್ರವಾದಿ'ಯಾಗಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ! ಈ ಪ್ರಯತ್ನವನ್ನು ನಿರ್ಮಾಪಕ ಅಣಜಿ ನಾಗರಾಜ್ ಕಾರ್ಯರೂಪಕ್ಕೆ ತರುತ್ತಿದ್ದಾರೆ.
'ಪ್ರವಾದಿ' ಒಂದು ಆನಿಮೇಷನ್ ಚಿತ್ರ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗ ಕಂಡ ಅಮೂಲ್ಯರತ್ನ ದಿವಗಂತ ಶಂಕರನಾಗ್ ಅವರನ್ನು ಮತ್ತೆ ಬೆಳ್ಳಿತೆರೆಗೆ ಪರಿಚಯಿಸಲಿದ್ದಾರೆ. ಇದೊಂದು ಶಂಕರನಾಗ್ ಅವರಿಗೆ ಗೌರವ ಸಲ್ಲಿಸುವ ಉಲ್ಲಾಸಭರಿತ ಪ್ರಯತ್ನ. ಶಂಕರನಾಗ್ ಮತ್ತೆ ನಟಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಆನಿಮೇಷನ್ ತಂತ್ರಜ್ಞಾನ ಇದನ್ನು ಸಾಧ್ಯವಾಗಿಸುತ್ತಿದೆ ಎನ್ನುತ್ತಾರೆ ನಿರ್ದೇಶಕ ಜಿಯಾ ಖಾನ್.
ಜಿಯಾ ಉಲ್ಲಾ ಖಾನ್ ಚೊಚ್ಚಲ ನಿರ್ದೇಶನದ, ಅಣಜಿ ನಾಗಾರಾಜ್ ನಿರ್ಮಾಣದ ಚಿತ್ರ "ಪ್ರವಾದಿ". ಕನ್ನಡ ಚಿತ್ರರಂಗದ ದಂತಕಥೆ, ಕರಾಟೆ ಕಿಂಗ್, ಆಟೋರಾಜ ನಮ್ಮೆಲ್ಲರ ಪ್ರೀತಿಯ ದಿ.ಶಂಕರನಾಗ್. "ಪ್ರವಾದಿ" ಚಿತ್ರದ ನಾಮಕರಣ ಸಮಾರಂಭ ಮತ್ತು ಚಿತ್ರದ ವಿನ್ಯಾಸವನ್ನು ಸಂಗೀತ ನಿರ್ದೇಶಕ ವಿ ಮನೋಹರ್ ಮತ್ತು ಮನದೀಪ್ ರಾಯ್ ಇತ್ತೀಚಿಗೆ ಅನಾವರಣಗೊಳಿಸಿದರು.
ಈ ಚಿತ್ರದಲ್ಲಿ ನಾವು ಯಶಸ್ಸು ಕಂಡರೆ ಇಂತಹ ಪ್ರಯತ್ನ ಇನ್ನೂ ಹೆಚ್ಚುಹೆಚ್ಚಾಗಿ ಕೈಗೆತ್ತಿ ಕೊಳ್ಳುತ್ತೇವೆ ಎಂದು ಅಣಜಿ ನಾಗರಾಜ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಪ್ರವಾದಿ' ಚಿತ್ರದ ಮೂಲಕ ಶಂಕರಣ್ಣ ಮತ್ತೆ ಬೆಳ್ಳಿತೆರೆಗೆ ಬರುತ್ತಿರುವುದು ಕನ್ನಡ ಚಿತ್ರರಸಿಕರನ್ನು ಖುಷಿಯಾಗಿಸಿದೆ.
ಆನಿಮೇಷನ್ ತಂತ್ರಜ್ಞಾನ ಬಳಸಿಕೊಂಡು ಶಂಕರನಾಗ್ ಅವರನ್ನು ಮತ್ತೆ ಬೆಳ್ಳಿತೆರೆಗೆ ತರುತ್ತಿರುವ ಬಗ್ಗೆ ಯಾವುದೇ ವಿವಾದ ಎದುರಾಗುವುದಿಲ್ಲವೆ ಎಂದು ಅಣಜಿ ಅವರನ್ನು ಕೇಳಿದರೆ, ಚಿತ್ರದಲ್ಲಿ ನಾವು ಶಂಕರನಾಗ್ ಅವರ ವ್ಯಕ್ತಿತ್ವದಬಗ್ಗೆ ಧಕ್ಕೆ ತರುವಂತೆ ಎಲ್ಲೂ ತೋರಿಸುತ್ತಿಲ್ಲ. ಹಾಗಾಗಿ ಈ ಚಿತ್ರ ನಿರ್ವಿವಾದದವಾಗಿರುತ್ತದೆ. ಮುಖ್ಯವಾಗಿ ಶಂಕರನಾಗ್ ಅಭಿಮಾನಿಗಳಿಗೆ ಮತ್ತಷ್ಟು ಆಪ್ತವಾಗುತ್ತದೆ ಎನ್ನುತ್ತಾರೆ ಅಣಜಿ.


Click it and Unblock the Notifications











