ಪ್ರಿಯಾ ಹಾಸನ್, ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಮಾಲಾಶ್ರೀ
ಎಲ್ಲ ನಿರೀಕ್ಷೆಗಳನ್ನೂ ಹುಸಿ ಮಾಡಿ 'ಜಂಬದ ಹುಡುಗಿ' ಪ್ರಿಯಾ ಹಾಸನ್ ಅಭಿನಯದ 'ಬಿಂದಾಸ್ ಹುಡುಗಿ' ಚಿತ್ರ ಸೆಂಚುರಿ ಬಾರಿಸಿದೆ. ಇತ್ತೀಚೆಗೆ ಈ ಸಂಭ್ರಮವನ್ನು ಬೆಂಗಳೂರಿನ ಬೆಲ್ ಹೋಟೆಲ್ನಲ್ಲಿ ಪ್ರಿಯಾ ಹಾಸನ್ ಮಾಧ್ಯಮ ಮಿತ್ರರೊಡನೆ ಹಂಚಿಕೊಂಡರು. ಅದರ ಹೈಲೈಟ್ಸ್ ಇಲ್ಲಿವೆ ಓದಿ. 'ಬಿಂದಾಸ್ ಹುಡುಗಿ' ಸಾಧನೆಯನ್ನು ಕನ್ನಡ ಚಿತ್ರರಂಗದ ಹಿರಿಯ ತಾರೆಗಳಾದ ಅಭಿನಯ ಶಾರದೆ ಜಯಂತಿ ಹಾಗೂ ಗಿರಿಜಾ ಲೋಕೇಶ್ ಮನಸಾರೆ ಹೊಗಳಿದರು.
ಅಭಿನೇತ್ರಿ ಜಯಂತಿ ಅವರು ಮಾತನಾಡುತ್ತಾ, ಪುರುಷರಿಗೆ ಹೋಲಿಸಿದರೆ ಮಹಿಳೆಯರದೇ ಒಂದು ಕೈ ಮೇಲು. ಪ್ರಿಯಾ ಹಾಸನ್ ಇದನ್ನು ನಿರೂಪಿಸಿದ್ದಾರೆ. 'ಬಿಂದಾಸ್ ಹುಡುಗಿ' ಚಿತ್ರ ಮಾಡಬೇಕಾದರೆ ಅವರು ಏನೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಮುಂದಿನ ಚಿತ್ರಕ್ಕೆ ಈ ರೀತಿಯ ಕಷ್ಟಗಳು ಎದುರಾಗದಿರಲಿ ಎಂದರು.
ಮಹಿಳೆಯರನ್ನು ಬೆಂಬಲಿಸದ ಪುರುಷರನ್ನು ಜಯಂತಿ ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ಈ ಮಾತಿಗೆ ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಕೂಡ ಧ್ವನಿಗೂಡಿಸಿದರು. ದಯವಿಟ್ಟು ಬಾಯಿಗೆ ಬಂದಂತೆ ಬರೆಯಬೇಡಿ. ನನ್ನಂತಹವರನ್ನು ಹುರುದುಂಭಿಸಿ. ತಮ್ಮಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಪ್ರಿಯಾ ಹಾಸನ್ ವಿನಂತಿಸಿಕೊಂಡರು.
ಕನ್ನಡ ಚಿತ್ರರಂಗಕ್ಕೆ ದೊರೆತ ಮತ್ತೊಬ್ಬ ಮಾಲಾಶ್ರೀ ಅಥವಾ ಮಂಜುಳ ಎಂದು ಪ್ರಿಯಾ ಹಾಸನ್ ಅವರನ್ನು ಕೆಸಿಎನ್ ಚಂದ್ರಶೇಖರ್ ಬಣ್ಣಿಸಿದರು. 'ಗಂಡುಬೀರಿ' ಮತ್ತು 'ರೆಬೆಲ್' ಎಂಬ ಮತ್ತೆರಡು ಚಿತ್ರಗಳ ಮೂಲಕ ಪ್ರಿಯಾ ಹಾಸನ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹಿಮಾಲಯದ ಎತ್ತರಕ್ಕೆ ಪ್ರಿಯಾ ಹಾಸನ್ ಬೆಳೆಯಲಿ ಎಂದು ಹಿರಿಯರ ಕಲಾವಿದರು ಪ್ರಿಯಾ ಹಾಸನ್ರನ್ನು ಹಾರೈಸಿದ್ದಾರೆ.


Click it and Unblock the Notifications











