'ಪೃಥ್ವಿ'ಯಲ್ಲಿ ಒಂದಾದ ಪುನೀತ್ ಪಾರ್ವತಿ ಜೋಡಿ
ಮಲಯಾಳಿ ಸುಂದರಿ ಪಾರ್ವತಿ ಮೆನನ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. 'ಮಳೆ ಬರಲಿ ಮಂಜು ಇರಲಿ' ಚಿತ್ರದ ನಂತರ ಆಕೆ ಮಲೆಯಾಳಂ ಚಿತ್ರಗಳಲ್ಲಿ ತೊಡಗಿಕೊಂಡಿದ್ದರು. ಮಿಲನ ಚಿತ್ರದ ಬಳಿಕ ಇದೀಗ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ; ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
ಪೃಥ್ವಿ ಚಿತ್ರವನ್ನು 'ಸವಾರಿ' ಚಿತ್ರದ ರೂವಾರಿ ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಪೃಥ್ವಿ ಚಿತ್ರಕ್ಕೆ ಈಗಾಗಲೇ ಹಾಡುಗಳ ಧ್ವನಿಮುದ್ರಣ ಕಾರ್ಯ ಭರದಿಂದ ಸಾಗಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಎರಡು ಹಾಡುಗಳ ಬಗ್ಗೆ ಪುನೀತ್ ಮೆಚ್ಚುಗೆ ಸೂಚಿಸಿದ್ದಾರೆ.
ಪೃಥ್ವಿ ಚಿತ್ರೀಕರಣ ಅಕ್ಟೋಬರ್ 15ರಿಂದ ಆರಂಭವಾಗಲಿದೆ. ಪಾರ್ವತಿ ಮೆನನ್ ಅವರಿಗೆ ಪೃಥ್ವಿ ಚಿತ್ರಕತೆ ತುಂಬ ಇಷ್ಟವಾಗಿದೆಯಂತೆ. ಕನ್ನಡದಲ್ಲಿ 'ಮಿಲನ' ಚಿತ್ರದಂತೆ ಪೃಥ್ವಿಯೂ ಯಶಸ್ಸನ್ನು ದಾಖಲಿಸುತ್ತದೆ ಎಂಬ ಉತ್ಸಾಹದಲ್ಲಿ ಪಾರ್ವತಿ ಇದ್ದಾರೆ. ಮಿಲನ ಚಿತ್ರ ಮಲಯಾಳಂಗೆ 'ನೀ ಎನಕ್ಕು ಇಷ್ಟಂ' ಎಂಬ ಹೆಸರಿನಲ್ಲಿ ರೀಮೇಕ್ ಆಗಿದೆ.
ಪೃಥ್ವಿ ಚಿತ್ರವನ್ನು ಸೂರಪ್ಪ ಬಾಬು ಮತ್ತು ಎನ್ ಎಸ್ ರಾಜಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಒಟ್ಟಿನಲ್ಲಿ ನಿನ್ನಿಂದಲೇ...ಮಳೆ ನಿಂತು ಹೋದ ಮೇಲೆ... ಎಂದು ಹಾಡಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದ ಪುನೀತ್-ಪಾರ್ವತಿ ಜೋಡಿ ಮತ್ತೊಮ್ಮೆ ಒಂದಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











