ಕಾಲ್ಗೆಜ್ಜೆಯಲ್ಲಿ ಮತ್ತೆ ಒಂದಾದ ಅನಂತನಾಗ್, ಲಕ್ಷ್ಮಿ
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಂಗೀತಮಯ ಚಿತ್ರಗಳು ತುಂಬಾ ಕಡಿಮೆಯಾಗಿದ್ದು ಈ ಅಪವಾದವನ್ನು ಹೋಗಲಾಡಿಸಲೆಂದೇ ಹೀಗೊಂದು ಚಿತ್ರ ಪ್ರಾರಂಭವಾಗುತ್ತಿದೆ. ಪರಿಪೂರ್ಣ ಶುದ್ಧ ಸಾಂಸಾರಿಕ ಹಾಗು ಸಂಗೀತಮಯ ಕಥೆ ಎಂದೇ ವರ್ಣಿಸಬಹುದಾದ ಕಾಲ್ಗೆಜ್ಜೆ ಹೆಸರಿನ ಚಿತ್ರದ ಸುಮಧುರ ಆರು ಹಾಡುಗಳಿಗೆ ರಾಗ ಸಂಯೋಜಿಸುವ ಕಾರ್ಯ ಕಳೆದವಾರ ಪ್ರಸಾದ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಪ್ರಾರಂಭವಾಯಿತು.
ಶೀರ್ಷಿಕೆ ಹೇಳುವ ಹಾಗೆ ಚಿತ್ರದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಕ್ಟೋಬರ್ 15 ರಿಂದ ಚಿತ್ರೀಕರಣ ಪ್ರಾರಂಭವಾಗಲಿರುವ ಈ ಚಿತ್ರವನ್ನು ಎಸ್. ಬಂಗಾರು ನಿರ್ದೇಶಿಸಲಿದ್ದು ಎಂ. ನಾಗಭೂಷಣ ನಿರ್ಮಾಪಕರಾಗಿದ್ದಾರೆ. ಮೆಲೋಡಿ ಸಂಗೀತಕ್ಕೆ ಹೆಸರಾದ ಗಂಧರ್ವ ಸಂಗೀತ ಸಂಯೋಜನೆ ಮಾಡುತ್ತಿದ್ದು ನಿರ್ದೇಶಕ ಎಸ್. ಬಂಗಾರು ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಎಸ್.ಪಿ.ಬಿ., ಚಿತ್ರಾ ಹಾಗು ಹೆಸರಾಂತ ಕನ್ನಡದ ಗಾಯಕ ಗಾಯಕಿಯರು ಹಾಡಲಿದ್ದಾರೆ. ಮದನ್ ಹರಿಣಿ ಹಾಗು ವಿಜಯನಗರ ಮಂಜು ನೃತ್ಯ ಸಂಯೋಜಿಸಲಿದ್ದಾರೆ.
ಸಂಗೀತ ಪ್ರಧಾನವಾದ ಚಿತ್ರವಾದರೂ ಮಾಸ್ ಪ್ರಿಯರಿಗಾಗಿ ಮಾಸ್ಮಾದರ ಸಾಹಸ ಸಂಯೋಜನೆಯ ಕೆಲವು ಸಾಹಸ ದೃಶ್ಯಗಳಿವೆ. ನಿರ್ದೇಶಕ ಎಸ್. ಮಹೇಂದರ್ ಅವರು ಪ್ರಸಾದ್ ಸ್ಟುಡಿಯೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಚಿತ್ರದ ಹಾಡುಗಳನ್ನು ಕೇಳಿ ಚಿತ್ರದ ಟೈಟಲ್ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೀನಸ್ ಮೂರ್ತಿ ಯವರ ಛಾಯಾಗ್ರಹಣ ಬಸವರಾಜ್ ಅರಸರ ಸಂಕಲನ ಈ ಚಿತ್ರಕ್ಕಿದ್ದು ಜಾಲಿಡೇಸ್ನ ವಿಶ್ವಾಸ್, ಅಂಬಾರಿ ಸುಪ್ರೀತ ಯುವ ಜೋಡಿಗಳಾಗಿ ನಟಿಸುತ್ತಿದ್ದಾರೆ. ಬಹಳ ದಿನಗಳ ನಂತರ ಅನಂತನಾಗ್ ಲಕ್ಷ್ಮಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಉಳಿದ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











