‘ಭಾಗ್ಯದ ಬಳೆಗಾರ’ ಈ ವಾರ (ಸೆ.11) ತೆರೆಗೆ
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸಿರುವ 'ಭಾಗ್ಯದ ಬಳೆಗಾರ" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗ್ರಾಮೀಣ ಸೊಗಡಿನ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದ ನಾಯಕ ಶಿವರಾಜಕುಮಾರ್. ಬೆಡಗಿ ನವ್ಯಾ ನಾಯರ್ 'ಭಾಗ್ಯದ ಬಳೆಗಾರ"ನ ನಾಯಕಿ.
ಈ ಜೋಡಿಯೊಂದಿಗೆ ಆದಿ ಲೋಕೇಶ್, ಸುಧಾರಾಣಿ, ಅನು ಪ್ರಭಾಕರ್, ಸತ್ಯಜಿತ್, ಅಮೃತ, ಪದ್ಮಾವಾಸಂತಿ, ಸುಧಾ ಬೆಳವಾಡಿ, ಪದ್ಮಿನಿ ಪ್ರಕಾಶ್, ನಟರಾಜ್, ಗಿರೀಶ್, ಪ್ರಕಾಶ್ ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿ ಸಾಯಿಕೃಷ್ಣ, ಸುರೇಶ್ ಮಂಗಳೂರು, ರಮೇಶ್ ಕಶ್ಯಪ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಮಧುರವಾಗಿದೆ ಹಾಗೂ ಅವರ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ಕೂಡ ಉತ್ತಮವಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ಓಂ.ಸಾಯಿಪ್ರಕಾಶ್ ನುಡಿದಿದ್ದಾರೆ. ಸೆನ್ಸಾರ್ ಮಂಡಳಿಯಿಂದ 'ಯು 'ಅರ್ಹಾತಾಪತ್ರ ಪಡೆದು ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ಚಿತ್ರ ನೋಡುಗರ ಪ್ರಶಂಸೆಗೂ ಪಾತ್ರವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ವಾತ್ಸಲ್ಯಭರಿತ ಚಿತ್ರಗಳನ್ನು ನಿರ್ದೇಶಿಸಿ ಖ್ಯಾತರಾದ ಓಂ.ಸಾಯಿಪ್ರಕಾಶ್ ಈ ಪ್ರೇಮ ಕಥಾನಕವನ್ನು ನಿರ್ದೇಶಿಸಿದ್ದಾರೆ. ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಅವರ ಛಾಯಾಗ್ರಹಣವಿದೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಕವಿರಾಜ್ ಹಾಗೂ ನಾಗೇಂದ್ರಪ್ರಸಾದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹ ನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆ 'ಭಾಗ್ಯದ ಬಳೆಗಾರ" ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











