ಮೈಸೂರಿನಲ್ಲಿ 'ಹೂ' ಚಿತ್ರಕ್ಕೆ ಕ್ಲೈಮ್ಯಾಕ್ಸ್
ಬಾಲ್ಯದ ನೆನಪುಗಳು ಅಮರ. ನೀವು ಆಗ ಹಾಡಿದ ಹಾಡು ಅಥವಾ ಸ್ವಾರಸ್ಯಕರ ಘಟನೆಯೋ ನಿಮ್ಮ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. 'ಹೂ' ಚಿತ್ರದಲ್ಲೂ ಹೀಗೆ. ನಾಯಕ ತನ್ನ ಗೆಳತಿಯೊಡನೆ ಬಾಲ್ಯದಲ್ಲಿ ಒಂದು ಹಾಡು ಹಾಡಿರುತ್ತಾನೆ. ಆ ಗೀತೆಯೇ ಮುಂದೆ ಅವರಿಬ್ಬರನ್ನು ಒಂದಾಗಿಸುತ್ತದೆ.
ಯಾವುದೋ ಕಾರಣಕ್ಕೆ ಗೆಳತಿ ನಾಯಕನಿಂದ ದೂರಾಗಿರುತ್ತಾಳೆ. ಈ ವಿಷಯದಿಂದ ಬೇಸರಗೊಂಡ ನಾಯಕ ಊರು ಬಿಡಲು ನಿಶ್ಚಯಿಸಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಾನೆ. ಅಷ್ಟರಲ್ಲಿ ಸತ್ಯಾಂಶ ಅರಿತ ಗೆಳತಿ ನಿಲ್ದಾಣಕ್ಕೆ ಆಗಮಿಸಿ ಬಾಲ್ಯದ ಗೀತೆಯನ್ನು ಹಾಡಿದಾಗ ವೈಮನಸ್ಯ ದೂರವಾಗುತ್ತದೆ. ಇದೇ 'ಹೂ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶ.
ಸಾಂಸ್ಕೃತಿಕ ನಗರ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣಗೊಂಡ ಈ ಭಾಗದ ಚಿತ್ರೀಕರಣದಲ್ಲಿ ನಾಯಕ ರವಿಚಂದ್ರನ್, ನಾಯಕಿಯರಾದ ನಮಿತಾ ಹಾಗೂ ಮೀರಾಜಾಸ್ಮಿನ್ ಮತ್ತು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಭಾಗವಹಿಸಿದ್ದರು. ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ಚಿತ್ರಕ್ಕೆ ಇದೇ ತಿಂಗಳ 20ರಿಂದ ಹಾಡುಗಳ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕ ದಿನೇಶ್ಗಾಂಧಿ ತಿಳಿಸಿದ್ದಾರೆ.
ನಾಯಕನಾಗಿ ನಟಿಸುತ್ತಿರುವ ರವಿಚಂದ್ರನ್ ಅವರು ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಜಿ.ಎಸ್.ವಿ.ಸೀತಾರಾಂ ಅವರ ಛಾಯಾಗ್ರಹಣವಿರುವ 'ಹೂಚಿತ್ರದಲ್ಲಿ ಆರು ಹಾಡುಗಳು ಅಡಕವಾಗಿದೆ. ಈ ಗೀತೆಗಳಿಗೆ ವಿ.ಹರಿಕೃಷ್ಣರ ಸಂಗೀತವಿದೆ. ರವಿಚಂದ್ರನ್ ಅವರಿಗೆ ಜೋಡಿಯಾಗಿ ಮೀರಾಜಾಸ್ಮಿನ್ ಹಾಗೂ ನಮಿತಾ ನಟಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್ ಹಾಗೂ ಶರಣ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











