ಗಣೇಶ ಚತುರ್ಥಿಗೆ ನಟ ಗಣೇಶ್ ಸಂಕಲ್ಪ ಏನು ಗೊತ್ತೆ?
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರವಿಘ್ನೇಶ್ವರನು ಒಳ್ಳೆ ಆಲೋಚನೆಯೊಂದನ್ನು ಕೊಟ್ಟಂತಿದೆ. ಅವರು ಈ ಬಾರಿಯ ಗಣೇಶ ಚತುರ್ಥಿಗೂ ಮುನ್ನ ಹೊಸ ಸಂಕಲ್ಪವನ್ನು ತೊಟ್ಟಿದ್ದಾರೆ. ಆದರೆ ಈ ಸಂಕಲ್ಪವನ್ನು ಅವರು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
ಕಲಾತ್ಮಕ ಹಾಗೂ ಹೊಸ ಅಲೆಯ ಚಿತ್ರಗಳಲ್ಲಿ ನಟಿಸುವುದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ. ಗಿರೀಶ್ ಕಾಸರವಳ್ಳಿ ಅವರಂತಹ ಪ್ರತಿಭಾನ್ವಿತ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸುವುದಾಗಿ ತಮ್ಮ ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸುಚಿತ್ರ ಫಿಲಂ ಸೊಸೈಟಿ ಆಯೋಜಿಸಿದ್ದ 'ಚಿತ್ರವರ್ಷ' ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರೀಮೇಕ್ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ತಕ್ಕ ಮಟ್ಟಿಗೆ ಲಾಭವಾಗಿದೆ. ಆದರೆ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಡ ಎಂದು ಇತ್ತೀಚೆಗಷ್ಟೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಬೋಳುವಾರು ಮಹಮದ್ ಕುಞ್ಞಿ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಚಿತ್ರಸಮೂಹ ಕೇವಲ ಕಲಾತ್ಮಕ ಚಿತ್ರಗಳಷ್ಟೇ ಅಲ್ಲದೆ ಕಮರ್ಷಿಯಲ್ ಚಿತ್ರಗಳನ್ನು ಪ್ರದರ್ಶಿಸಿದ್ದು ವಿಶೇಷ. ಮುಂಗಾರು ಮಳೆ, ಮೊಗ್ಗಿನ ಜಡೆ, ಪ್ರೀತಿ ಪ್ರೇಮ ಪ್ರಣಯ, ಹಾರು ಹಕ್ಕಿಯನೇರಿ, ನಾನು ಗಾಂಧಿ, ದುನಿಯಾ, ಸೈನೈಡ್, ನಾಯಿ ನೆರಳು, ತುತ್ತೂರಿ, ಮುಖಪುಟ ಚಿತ್ರಗಳು ಇನ್ನೂ ಪ್ರದರ್ಶನ ಕಾಣುತ್ತಿವೆ.


Click it and Unblock the Notifications











