ಅಭಿಮಾನಿಗಳಿಗೆ ಲಾಠಿ ರುಚಿ: ದರ್ಶನ್ ನೋಡಿದ್ದು ಸಾರಥಿ!

ದರ್ಶನ್ ಗಾಗಿ ಅಸಂಖ್ಯಾತ ಅಭಿಮಾನಿಗಳು ನರ್ತಕಿ ಚಿತ್ರಮಂದಿರದ ಬಳಿ ಜಮಾಯಿಸಿದ್ದರು. ಆದರೆ ಅಲ್ಲಿ ದರ್ಶನ್ ಬದಲಿಗೆ ಬಂದಿದ್ದು ಪೊಲೀಸರು. ನೆರೆದಿದ್ದ ಜನರ ನಿರೀಕ್ಚೆ ಮೇರೆ ಮೀರಿ ನೂಕು-ನುಗ್ಗಾಟ ಪ್ರಾರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತೆನ್ನುವಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ನಿಯಂತ್ರಿಸಿದರು. ದರ್ಶನ್ ಬದಲು ಅಭಿಮಾನಿಗಳಿಗೆ ಪೊಲೀಸರ 'ಲಾಠಿ ದರ್ಶನ'ವಾಯಿತು.
ಇದೊಂದು ಕಪೋಲಕಲ್ಪಿತ ಸುದ್ದಿ ಅದೆಲ್ಲಿಂದ ಬಂತೋ ದೇವರೇ ಬಲ್ಲ! ದರ್ಶನ್ ಎಲ್ಲೂ, ಯಾರಲ್ಲೂ ಅಲ್ಲಿ ದರ್ಶನ ಕೊಡುತ್ತೇನೆ ಎಂದು ಹೇಳೇ ಇರಲಿಲ್ಲವಂತೆ. ಆದರೆ ಅಭಿಮಾನಿಗಳಿಗೆ ಅದೆಲ್ಲಾ ಹೇಗೆ ತಿಳಿಯಬೇಕು? ಬರುತ್ತಾರೆ ಎಂದು ಕಾದು, ಕೆಲವರು ಲಾಠಿ ರುಚಿ ನೋಡಿ, ದರ್ಶನ್ 'ದರ್ಶನ' ಇಲ್ಲದೇ ಮನೆಗೆ ಮರಳಿದರೆ ಟಿಕೆಟ್ ಸಿಕ್ಕವರು ಸಿನಿಮಾದಲ್ಲಿ 'ದರ್ಶನ' ಮಾಡಿಕೊಂಡು ಹೋದರಂತೆ.
ಪಾಪ, ಅಭಿಮಾನಿಗಳಿಗೆ ಹೇಗೆ ಅರ್ಥವಾಗಬೇಕು, ದರ್ಶನ್ ಈಗಲೇ ಚತ್ರಮಂದಿರಕ್ಕೆ ಬಂದರೆ ಅಭಿಮಾನಿಗಳನ್ನು ನಿಯಂತ್ರಿಸಲು ಎಲ್ಲಾ ಪೊಲೀಸರೂ ಅಲ್ಲೇ ಬರಬೇಕಾಗುತ್ತದೆ ಎಂಬುದು. ಮೇಲಾಗಿ ದರ್ಶನ್ ಈಗ ತುಂಬಾ ಬ್ಯುಸಿ ಇರುತ್ತಾರಲ್ಲವೇ? ಒಂದು ತಿಂಗಳು ಮಾಡಬೇಕಾಗಿದ್ದ ಕೆಲಸ ಅವರಿಗಾಗಿ ಕಾಯುತ್ತಿದೆ ತಾನೇ? ಎಷ್ಟಾದರೂ ಮೊದಲು ವೃತ್ತಿ ಧರ್ಮ, ಆಮೇಲೆ ಬೇರೇದು ತಾನೇ!
ಹಾಗಾದರೆ ದರ್ಶನ್ ನಿನ್ನೆ ಏನು ಮಾಡಿದರು ಗೊತ್ತೆ. ಖಾಸಗಿಯಾಗಿ ಆಪ್ತರೊಂದಿಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಅವರದೇ ಚಿತ್ರ 'ಸಾರಥಿ' ಯನ್ನು ನೋಡಿ ಸಂತೋಷಗೊಂಡರು. ಇನ್ನೂ ಯಶಸ್ವಿಗೊಳಿಸಲು ಅದರ 'ಪ್ರಮೋಷನ್'ಗಾಗಿ ಯೋಜನೆ ಹಾಕಿಕೊಂಡರು. ಅಭಿಮಾನಿಗಳಿಗೆ ಹೇಗೂ 'ಸಿನಿಮಾ' ಮೂಲಕವೇ 'ದರ್ಶನ' ಆಗುತ್ತಿದೆ ಅಲ್ಲವೇ?!


Click it and Unblock the Notifications