ಮತ್ತೆ ವೀರಪ್ಪನ್ ಕರೆತಂದ ರಮೇಶ್
ರಿಯಲ್ ಲೈಫ್ ಕಥೆಗಳನ್ನು ರೀಲ್ ಗೆ ತಂದು ಯಶಸ್ವಿಯಾಗುವುದು ಅಷ್ಟು ಸುಲಭದ ಕೆಲಸವಲ್ಲ.ಆದರೆ, ನೈಜ ಘಟನೆಗಳ ಸುತ್ತ ಕಥೆ ಹೆಣೆದು, ಜನ ಮೆಚ್ಚುವ ಸಿನಿಮಾ ಮಾಡುವ ಕಲೆ ನಿರ್ದೇಶಕ ಎಎಂಆರ್ ರಮೇಶ್ ಗೆ ಒಲಿದಿದೆ. ಎಲ್ಟಿಟಿಇ ಉಗ್ರರ ಕುರಿತು "ಸೈನೈಡ್" ಎಂಬ ಅದ್ಭುತ ಚಿತ್ರ ನೀಡಿದ ರಮೇಶ್ ನಂತರ "ಪೊಲೀಸ್ ಕ್ವಾರ್ಟರ್ಸ್" ಕಟ್ಟಿದರೂ ಜನ ಬರಲಿಲ್ಲ. ಈಗ ಕಾಡುಗಳ್ಳ ವೀರಪ್ಪನ್ ಅನ್ನು ತೆರೆಗೆ ತರುತ್ತಿದ್ದಾರೆ.
ಕರ್ನಾಟಕ -ತಮಿಳುನಾಡು ಸರಕಾರಗಳನ್ನು ಕಾಡಿದ್ದ ಕಾಡುಗಳ್ಳ,ನರಹಂತಕ ವೀರಪ್ಪನ್ ಚಿತ್ರದ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ರಮೇಶ್ ಅವರೇ ಹೊತ್ತಿದ್ದಾರೆ. 'ವೀರಪ್ಪನ್ ಅಟ್ಟಹಾಸ" ಎಂಬ ಹೆಸರಲ್ಲಿ ಕನ್ನಡದಲ್ಲಿ ಹಾಗೂ ವಾನಾ ಯುದ್ಧಂ ಎಂದು ತಮಿಳಿನಲ್ಲಿ ಈ ಚಿತ್ರ ತೆರೆ ಕಾಣಲಿದೆ.
ಭರ್ಜರಿ ತಾರಾಗಣ: ಈ ಚಿತ್ರದಲ್ಲಿ ಪ್ರತಿಭಾವಂತ ನಟ ಕಿಶೋರ್ ಅವರು ವೀರಪ್ಪನ್ ಆಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎನ್ಕೌಂಟರ್ ಸ್ಪೆಷಲಿಸ್ಟ್, ಎಸ್ ಟಿಎಫ್ ಅಧಿಕಾರಿ ವಿಜಯ್ ಕುಮಾರ್ ಅವರ ಪಾತ್ರವನ್ನು ನಟ ಅರ್ಜುನ್ ಸರ್ಜಾ ನಿರ್ವಹಿಸುತ್ತಿದ್ದಾರೆ. ಡಾ. ರಾಜ್ ಕುಮಾರ್ ಅವರ ಪಾತ್ರವನ್ನು ತೆಲುಗು ಚಿತ್ರರಂಗದ ಮೇರು ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರು ನಿರ್ವಹಿಸುವ ಸಾಧ್ಯತೆಯಿದೆ.
'ಇದು ಸಂಪೂರ್ಣ ವೀರಪ್ಪನ್ ಜೀವನ ಕುರಿತಾದ ಚಿತ್ರ. ವೀರಪ್ಪನ್ ಕಾಡಿನಲ್ಲಿ ಕಳೆದ ದಿನಗಳು, ಅವನು ಬೆಳೆದ ಬಗೆ ಮತ್ತು ಪರ್ಯಾವಸಾನಗೊಂಡ ರೋಚಕ ಸಂಗತಿಗಳೇ ಚಿತ್ರದ ಹೈಲೈಟ್. ಮೆಟ್ಟೂರು, ಸತ್ಯಮಂಗಲಂ ಅರಣ್ಯ ಪ್ರದೇಶ, ವೀರಪ್ಪನ್ ಓಡಾಡಿದ ಗ್ರಾಮಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಯುವನ್ ಶಂಕರ್ ರಾಜ ಸಂಗೀತ ನೀಡಲಿದ್ದಾರೆ ಎಂದು ನಿರ್ದೇಶಕ ರಮೇಶ್ ಹೇಳಿದರು.
ಚಿತ್ರಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗಿಲ್ಲ. ಅರಣ್ಯದಲ್ಲಿ ಚಿತ್ರೀಕರಿಸಲು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯಲಾಗಿದೆ. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಅವರಿಗೆ ಕೂಡಾ ಈ ಸಿನಿಮಾ ಬಗ್ಗೆ ತಿಳಿಸಲಾಗಿದೆ. ಮೈಸೂರ್ ಜೈಲಿನಲ್ಲಿ ವೀರಪ್ಪನ್ ನ ಸಹಚರರನ್ನು ಭೇಟಿ ಮಾಡಿ ಬಂದಿದ್ದೇನೆ. ಎಲ್ಲವೂ ಸುಗುಮವಾಗಿ ನಡೆಯಲಿದೆ ಎಂಬ ಆಶಯವಿದೆ ಎಂದು ರಮೇಶ್ ಹೇಳುತ್ತಾರೆ.
ಕನ್ನಡದಲ್ಲಿ ಈಗಾಗಲೇ ಡೈನಾಮಿಕ್ ಹೀರೋ ದೇವರಾಜ್ ಅಭಿನಯದಲ್ಲಿ ಬಂದ ವೀರಪ್ಪನ್ ಕುರಿತ ಚಿತ್ರ ಯಶಸ್ವಿಯಾಗಿರುವುದರಿಂದ, ರಮೇಶ್ ಅವರ ವೀರಪ್ಪನ್ ಯಾವ ರೀತಿ ಕಾಣುತ್ತಾನೆ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.


Click it and Unblock the Notifications











