ಏಪ್ರಿಲ್ 27ಕ್ಕೇ ಬಿಡುಗಡೆ ಮಾಡುವೆ: ಮುನಿರತ್ನ ಘೋಷಣೆ
"ನನ್ನ ಸಿನಿಮಾವನ್ನು ನಾನು ಈ ಮೊದಲು ಘೋಷಿಸಿದಂತೆ ಇದೇ ತಿಂಗಳು 27ಕ್ಕೇ (27 ಏಪ್ರಿಲ್ 2012) ತೆರೆಗೆ ತರಲಿದ್ದೇನೆ. ಯಾರು ಏನೇ ಅಂದರೂ, ಯಾರು ನನಗಿಂತ ಮೊದಲು ಪ್ರಾರಂಭಿಸಿ ಈಗ ಮುಗಿಸಿದ್ದರೂ ನನ್ನ ಚಿತ್ರಕ್ಕೂ ಅವರ ಚಿತ್ರಕ್ಕೂ ಸಂಬಂಧವಿಲ್ಲ. ಎರಡೂ ಚಿತ್ರಗಳ ನಾಯಕರು ಉಪೇಂದ್ರ ಎಂಬುದು ಮಾತ್ರ ಸತ್ಯ. ಆದರೆ ನಾನು ಕಠಾರಿವೀರ ಸುರಸುಂದರಾಂಗಿ ಚಿತ್ರವನ್ನು 27ಕ್ಕೇ ಬಿಡುಗಡೆ ಮಾಡುವುದು ಗ್ಯಾರಂಟಿ"
ಹೀಗೆಂದು ಗುಡುಗಿದ್ದು ನಿರ್ಮಾಪಕ ಮುನಿರತ್ನ. ಸೋಮವಾರ (ಏಪ್ರಿಲ್ 9, 2012) ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿರುವ ಮುನಿರತ್ನ ಹೇಳಿರುವ ವಿಷಯಗಳೆಲ್ಲವೂ ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜುರ ವಿರುದ್ಧ ತೆಗೆದುಕೊಂಡ ನಿರ್ಣಯಕ್ಕೆ ಸಂಬಂಧಿಸಿದ್ದು. ಕಾರಣ, ಕಠಾರಿವೀರ ಸುರಸುಂದರಾಂಗಿ ಚಿತ್ರ ಬಿಡುಗಡೆ ಘೋಷಣೆ ನಂತರ ಕೆ ಮಂಜು, ಮುನಿರತ್ನರ ವಿರುದ್ಧ ತಿರುಗಿ ಬಿದ್ದಿದ್ದಾರೆ.
"ತಮ್ಮ ಗಾಡ್ ಫಾದರ್ ಚಿತ್ರ ಕಠಾರಿವೀರಕ್ಕಿಂತ ಮೊದಲು ಬಿಡುಗಡೆಯಾಗಬೇಕು. ಕಾರಣ, ಗಾಡ್ ಫಾದರ್', ಮುನಿರತ್ನರ ಕಠಾರಿವೀರಕ್ಕಿಂತ ಮೊದಲು ಪ್ರಾರಂಭಿಸಿದ್ದು" ಎಂದಿದ್ದರು ಮಂಜು. ಆದರೆ ಮುನಿರತ್ನ, "ಆ ವಿಷಯವನ್ನು ಈಗ ಹೇಳುತ್ತಿರುವುದೇಕೆ? ನಾನು ಚಿತ್ರದ ಬಿಡುಗಡೆ ಘೋಷಿಸಿದ ನಂತರ ಇದೆಲ್ಲಾ ತಗಾದೆ ಏಕೆ?" ಎಂದು ಮಂಜು ಮಾತಿಗೆ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ಕಠಾರಿವೀರ ಚಿತ್ರವನ್ನು 27ಕ್ಕೇ ತರಲಿದ್ದಾರಂತೆ ಮುನಿರತ್ನ. (ಒನ್ ಇಂಡಿಯಾ ಕನ್ನಡ)


Click it and Unblock the Notifications











