ವಿಷ್ಣು ಕುರಿತ ಅಪರೂಪದ ಕೃತಿ ಸ್ನೇಹ ಸಂಪತ್ತು
ಸಾಹಸಸಿಂಹ ವಿಷ್ಣುವರ್ಧನ್ ಕುರಿತ ಅಪರೂದ ಈ ಪುಸ್ತಕ ಗೆಳೆತನಕ್ಕೆ ಅನ್ವರ್ಥಕ. ರವಿವಾರ ವಿಷ್ಣು ಅವರ ಜೀವನ ಚರಿತ್ರೆ "ಸ್ನೇಹ ಸಂಪತ್ತು" ಪುಸ್ತಕ ಲೋಕಾರ್ಪಣೆ ಮಾಡಲಾಯಿತು.ಬಸವನಗುಡಿ ನ್ಯಾಷನಲ್ ಕಾಲೇಜಿನ ಗಾಂಧಿ ನೆಹರು ಸಭಾಂಗಣದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಕೃತಿಯನ್ನು ಬಿಡುಗಡೆ ಮಾಡಿದರು.
ಕೃತಿ ಬಿಡುಗಡೆ ಬಳಿಕ ಅವರು ಮಾತನಾಡುತ್ತಾ, ವಿಷ್ಣುವರ್ಧನ್ ಅವರೊಂದಿಗೆ ಹಲವು ಹಿರಿಯ ಕಲಾವಿದರು ಕಳೆದ ಮಧುರ ನೆನಪುಗಳು ಪುಸ್ತಕದಲ್ಲಿ ದಾಖಲಾಗಿವೆ. ವಿಷ್ಣು ಅವರ ಪ್ರೀತಿ, ಅನುಭವಗಳನ್ನು ದಾಖಲಿಸಿದ ಅವರ ಸ್ನೇಹಿತರು ನಿಜಕ್ಕೂ ಸ್ನೇಹವನ್ನು ಮೆರೆದಿದ್ದಾರೆ. ಅವರ ನೆನಪು ಹಾಗೂ ನಿಮ್ಮ ಸ್ನೇಹ ಚಿರಾಯುವಾಗಲಿ ಎಂದರು.
ನಟ ಎಂ ಕೆ ಸುಂದರರಾಜ್ ಮಾತನಾಡುತ್ತಾ, ಬದುಕಿನಲ್ಲಿ ಏನೆಲ್ಲಾ ಇದ್ದರೂ ಸ್ನೇಹಿತರಿಲ್ಲದೆ ನೆಮ್ಮದಿ ಸಿಗುವುದಿಲ್ಲ. ಕುಮಾರ್(ವಿಷ್ಣು) ನಮ್ಮೊಂದಿಗಿಲ್ಲ.ಆದರೆ ಅವರು ತೋರಿದ ಸ್ನೇಹ, ಪ್ರೀತಿ ಇನ್ನೂ ನಮ್ಮಲ್ಲಿ ಬೆಚ್ಚಗಿದೆ. ಕನ್ನಡ ಚಿತ್ರರಂಗಲ್ಲೇ ವಿಷ್ಣು ಅವರು ಸ್ಫುರದ್ರೂಪಿ ಹಾಗೂ ಆಕರ್ಷಕ ನಟ. ಕಷ್ಟ, ಸುಖ ಎಲ್ಲವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿಯೆ ಅವರು 'ಸ್ನೇಹಲೋಕ'ವನ್ನು ಸ್ಥಾಪಿಸಿದ್ದು ಎಂದರು.
ಕೃತಿ ಬಿಡುಗಡೆ ಸಮಾರಂಭಕ್ಕೆ ಸಿನಿಮಾ ತಾರೆಗಳಿಗಿಂತ ಅಧಿಕ ಸಂಖ್ಯೆಯಲ್ಲಿ ವಿಷ್ಣು ಅಭಿಮಾನಿಗಳು ಆಗಮಿಸಿದ್ದರು. ವಿಷ್ಣು ಅಭಿಮಾನಿಗಳು ತಾವು ಕೊಂಡ ಪುಸ್ತಕಕ್ಕೆ ಭಾರತಿ ಅವರ ಹಸ್ತಾಕ್ಷರ ಪಡೆದು ಸಂತಸ ಪಟ್ಟರು. ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿ, ನಟ ಕೂದವಳ್ಳಿ ಚಂದ್ರಶೇಖರ್, ಕೃತಿಯ ಲೇಖಕ ಎಂ ನರಸಿಂಹಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ ಲೀಲಾವತಿ ಮುಂತಾದವರು ಉಪಸ್ಥಿತರಿದ್ದರು.


Click it and Unblock the Notifications











