ಕನ್ನಡಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಪುನರಾಗಮನ
ಈ ಹಿಂದೆ ಕ್ರೇಜಿಸ್ಟಾರ್ ಅಭಿನಯದ 'ಸಿಪಾಯಿ' ಚಿತ್ರದಅತಿಥಿ ಪಾತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನವನ್ನು ಮಾಡಿದ್ದಾರೆ ವೀರೇಂದ್ರ ಬಾಬು. ಇವರು 'ಸ್ವಯಂಕೃಷಿ' ಚಿತ್ರದನಾಯಕ ನಟ, ನಿರ್ದೇಶಕ, ನಿರ್ಮಾಪಕ ಹೀಗೆ ಸಮಸ್ತ ಜವಾಬ್ದಾರಿಯನ್ನು ಹೊತ್ತವರು.
ಇವರು ಈಗಾಗಲೆ ಚಿರಂಜೀವಿ ಅವರನ್ನು ಸಂಪರ್ಕಿಸಿ ತಮ್ಮ ಚಿತ್ರದಲ್ಲಿ ನಟಿಸಲು ಕೇಳಿದರಂತೆ. ಇದಕ್ಕೆ ಚಿರಂಜೀವಿ ನಾನೇಕೆ ನಿಮ್ಮ ಚಿತ್ರದಲ್ಲಿ ನಟಿಸಬೇಕು ಎಂದರಂತೆ. ಇದಕ್ಕೆ ಬಾಬು ಕೊಟ್ಟ ಉತ್ತರ, ತಾವು ಈ ಹಿಂದೆ ತೆಲುಗಿನಲ್ಲಿ 'ಸ್ವಯಂಕೃಷಿ' ಎಂಬ ಚಿತ್ರ ಮಾಡಿದ್ದೀರಿ. ಈಗ ಅದೇ ಹೆಸರನ್ನೇ ತಮ್ಮ ಚಿತ್ರಕ್ಕೂ ಇಟ್ಟಿದ್ದೇನೆ. ಜೀವನದಲ್ಲಿ ಜಿಗುಪ್ಸೆ ಹೊಂದಿರುವ ಯುವಕರು ಏನೆಲ್ಲಾ ಸಾಧಿಸಬಹುದು ಎಂಬ ಸಂದೇಶ ನಮ್ಮ ಚಿತ್ರದಲ್ಲಿದೆ. ತಾವು ಅಭಿನಯಿಸಿದರೆ ಚಿತ್ರಕ್ಕೆ ಮತ್ತಷ್ಟು ಬಲಬಂದಂತಾಗುತ್ತದೆ ಎಂದರಂತೆ.
ಈ ಮಾತುಗಳಿಂದ ಚಿರಂಜೀವಿ ಖುಷಿಯಾಗಿ ಹಾಗೇ ಆಗಲಿ ತಮ್ಮ ಚಿತ್ರದಲ್ಲಿ ನಟಿಸುತ್ತೇನೆ ಎಂದಿದ್ದಾರಂತೆ. ತೆಲುಗಿನಲಿ ಚಿರಂಜೀವಿ ಅಭಿನಯಿಸಿದ್ದ 'ಸ್ವಯಂಕೃಷಿ' ಚಿತ್ರ ಫಿಲಂಪೇರ್ ಹಾಗೂ ನಂದಿ ಪ್ರಶಸ್ತಿಗಳಿಗೆ ಪಾತ್ರವಾಗಿತ್ತು. ಕೆ ವಿಶ್ವನಾಥ್ ನಿರ್ದೇಶಿಸಿದ್ದ ಈ ಚಿತ್ರ ಚಮ್ಮಾರನೊಬ್ಬನ ಜೀವನದ ಏಳುಬೀಳುಗಳನ್ನು ತೆರೆದಿಟ್ಟಿತ್ತು. ಕಮರ್ಷಿಯಲ್ ಸಿನಿಮಾ ಆದರೂ ಕಲಾತ್ಮಕವಾಗಿ ಮೂಡಿಬಂದಿತ್ತು.
ವೀರೇಂದ್ರ ಬಾಬು ಅವರ 'ಸ್ವಯಂಕೃಷಿ' ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರು ಮುಖ್ಯಮಂತ್ರಿ ಪಾತ್ರ ಪೋಷಿಸಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಉಮಾಶ್ರೀ, ಸುಮನ್, ಬಿಯಾಂಕಾ ದೇಸಾಯಿ, ತಮನ್ನಾ ಮುಮೈತ್ ಖಾನ್ ಇದ್ದಾರೆ. ಅಭಿಮಾನ್ ರಾಯ್ ಸಂಗೀತ ಚಿತ್ರಕ್ಕಿದ್ದು ಈಗಾಗಲೆ 92 ದಿನಗಳ ಚಿತ್ರೀಕರಣ ಪೂರೈಸಿದೆ.


Click it and Unblock the Notifications











