ಕಿರುತೆರೆಯತ್ತ ಪ್ರಿಯಾಂಕಾ ಉಪೇಂದ್ರ ಚಿತ್ತ
'ಶ್ರೀಮತಿ' ಉಪೇಂದ್ರ ಅರ್ಥಾತ್ ಪ್ರಿಯಾಂಕಾ ತ್ರಿವೇದಿ ಬಣ್ಣದ ಕಿರುದಾರಿಯ ಕಡೆ ನೋಡತೊಡಗಿದ್ದಾರೆ. ವಾಹಿನಿಯೊಂದು ರಿಯಾಲಿಟಿ ಶೋ ನಡೆಸಿಕೊಡುವಂತೆ ಆಕೆಯನ್ನು ಕೇಳಿಕೊಂಡಿದ್ದು, ಅದಕ್ಕೆ ಅಸ್ತು ಎನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಅದು ಯಾವ ವಾಹಿನಿ, ಸಿಗಲಿರುವ ಸಂಭಾವನೆ ಎಷ್ಟು ಇತ್ಯಾದಿ ಸಂಗತಿಗಳನ್ನು ಸದ್ಯಕ್ಕೆ ಗುಟ್ಟುಮಾಡಿದ್ದಾರೆ.
ಪ್ರಿಯಾಂಕಾ ಈಗ ಇಬ್ಬರು ಮಕ್ಕಳ ತಾಯಿ. ಎರಡನೇ ಮಗನಂತೂ ಶ್ರೀಮತಿ" ಚಿತ್ರದ ಚಿತ್ರೀಕರಣ ನಡೆದ ಜಾಗೆಗೆ ಅಪ್ಪ-ಅಮ್ಮನ ಜೊತೆಯಲ್ಲಿ ಹೋಗಿ ಬರುತ್ತಿದ್ದ. ಅವನಿಗೆ ಏನೇನು ಬೇಕೋ ಅದೆಲ್ಲವನ್ನೂ ಪುಟ್ಟ ಚೀಲಕ್ಕೆ ಹಾಕಿಕೊಂಡು ಅವನೆದುರಲ್ಲೇ ಅಮ್ಮ ನಟಿಸಬೇಕಿತ್ತು. ಸಿನಿಮಾ ಜಗತ್ತಿನ ವಾತಾವರಣ ಮಕ್ಕಳ ಮನಸ್ಸಿನ ಮೇಲೆ ಅದೆಂಥಾ ಪರಿಣಾಮ ಬೀರಬಹುದು ಎಂಬುದು ಪ್ರಿಯಾಂಕಾ ಆತಂಕ. ಅದಕ್ಕೇ ಅವರು ಇದ್ದುದರಲ್ಲಿ ಕಿರುತೆರೆಯೇ ವಾಸಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
'ಎಂಟರ್ಟೇನ್ಮೆಂಟ್ ಕೇ ಲಿಯೆ ಕುಚ್ ಭೀ ಕರೋ" ಎಂಬ ಹಿಂದಿ ರಿಯಾಲಿಟಿ ಶೋ ಆಧಾರದಲ್ಲೇ ಕನ್ನಡದಲ್ಲೂ ಕಾರ್ಯಕ್ರಮ ಶುರುವಾಗಲಿದೆ. ಪ್ರಿಯಾಂಕಾ ನಡೆಸಿಕೊಡಲು ನಿರ್ಧರಿಸಿರುವುದು ಅದೇ ಕಾರ್ಯಕ್ರಮವನ್ನು. ಖುದ್ದು ಪ್ರಿಯಾಂಕಾಗೆ ರಿಯಾಲಿಟಿ ಶೋಗಳೆಂದರೆ ಇಷ್ಟವಂತೆ. ಹಾಗಾಗಿ ಅದನ್ನು ನಡೆಸಿಕೊಡುವುದು ತಮ್ಮ ಪ್ರೀತಿಯ ಕೆಲಸ ಅಂತಾರವರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











