ಸಾಯಿಪ್ರಕಾಶ್ ನಿರ್ದೇಶನದಲ್ಲಿ ಆದಿಚುಂಚನಗಿರಿ ಶ್ರೀ

ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಆಕ್ಷನ್, ಕಟ್ ಹೇಳಲಿದ್ದಾರೆ. ಚಿತ್ರದಲ್ಲಿ ಸ್ವತಃ ಬಾಲಗಂಗಾಧರ ಸ್ವಾಮೀಜಿಗಳು ಅಭಿನಯಿಸಲು ತಮ್ಮ ಒಪ್ಪಿಗೆಯನ್ನು ಸೂಚಿಸಿರುವುದು ವಿಶೇಷ. "ಬಹಳಷ್ಟು ಜನ ತಮ್ಮ ಬಳಿಗೆ ಬಂದು ಆದಷ್ಟು ಬೇಗ ಸಿನಿಮಾ ಮಾಡುವಂತೆ ವಿನಂತಿಸಿಕೊಂಡಿದ್ದರು. ನಾನು ಸಾಧಿಸುವುದು ಇನ್ನೂ ಸಾಕಷ್ಟಿದೆ ಎಂದು ಅವರಿಗೆ ಹೇಳಿದ್ದೆ. ಈಗ ಕಾಲ ಕೂಡಿಬಂದಿದೆ" ಎಂದು ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದಾರೆ.
"ಆದಿಚುಂಚನಗಿರಿ ಮಠ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಮಠದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಬರದಂತೆ ಚಿತ್ರವನ್ನು ತೆರೆಗೆ ತರಬೇಕು ಎಂದು ನಿರ್ಮಾಪಕ ನರಸಿಂಹಯ್ಯ ಅವರಿಗೆ ಸೂಚಿಸಿರುವುದಾಗಿ" ಬಾಲಗಂಗಾಧರನಾಥ ಸ್ವಾಮೀಜಿಗಳು ವಿವರ ನೀಡಿದ್ದಾರೆ .
ಆದರೆ ಸಾಯಿ ಪ್ರಕಾಶ್ ಪ್ರಕಾರ, ಚಿತ್ರದಲ್ಲಿ ಅಭಿನಯಿಸಲು ರೆಬಲ್ ಸ್ಟಾರ್ ಅಂಬರೀಷ್ ಸೇರಿದಂತೆ ಹಲವಾರು ಕಲಾವಿದರನ್ನು ಕೇಳಲಾಗಿದೆ ಎಂದಿದ್ದಾರೆ. ಅದರೆ ಹೀಗೆ ಮಾಡುವುದರಿಂದ ಇದೊಂದು ಒಕ್ಕಲಿಗರ ಚಿತ್ರ ಎಂಬ ಭಾವನೆ ಜನರಲ್ಲಿ ಮೂಡುವುದಿಲ್ಲವೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಚಿತ್ರದಲ್ಲಿ ಮಠದ 2,000 ವರ್ಷಗಳ ಗತ ಇತಿಹಾಸವನ್ನು ತೋರಿಸಲಾಗುತ್ತದೆ ಎಂದಿದ್ದಾರೆ ಸಾಯಿಪ್ರಕಾಶ್. ಆದರೆ ರಾಜ್ಯ ರಾಜಕೀಯದಲ್ಲಿ ಮಠ ಸಾಕಷ್ಟು ಪ್ರಭಾವ ಬೀರಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹಾಗೂ ಸ್ವಾಮೀಜಿಗಳ ನಡುವಿನ ಸಂಬಂಧಗಳು ಚಿತ್ರದಲ್ಲಿ ತೋರಿಸಲಾಗುತ್ತದೆಯೇ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಎಲ್ಲಾ ರಾಜಕೀಯ ಅಂಶಗಳಿಂದ ಚಿತ್ರ ಹೊರತಾಗಿರಬೇಕು ಎಂಬುದು ಸ್ವಾಮೀಜಿಗಳ ಸೂಚನೆ ಎನ್ನಲಾಗಿದೆ.


Click it and Unblock the Notifications











