ನಾನು ನರಿ ಇದ್ದಂಗೆ; ಚಾಲೆಂಜಿಂಗ್ ಸ್ಟಾರ್ ದರ್ಶನ್
ಈ ಮಾತನ್ನು ಹೇಳುತ್ತಿರುವುದು ಬೇರಾರೂ ಅಲ್ಲ, ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್. 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿರಿಯ ನಟಿ ಜಯಪ್ರದಾ, ಶಶಿಕುಮಾರ್ ಸೇರಿದಂತೆ ಚಿತ್ರತಂಡದ ಬಹುತೇಕರು ಉಪಸ್ಥಿತರಿದ್ದರು.
ಬೆಂಗಳೂರು ಅರಮನೆಯಲ್ಲಿ ಕೊನೆಯ ಎರಡು ದಿನಗಳ ಚಿತ್ರೀಕರಣ ಮುಗಿಸಿಕೊಂಡ 'ಸಂಗೊಳ್ಳಿ ರಾಯಣ್ಣ' ಪತ್ರಿಕಾಗೋಷ್ಠಿ ಹೋಟೆಲ್ ಏಟ್ರಿಯಾದಲ್ಲಿ ನಡೆಯಿತು. ಅಲ್ಲಿ ದರ್ಶನ್ ಮಾತನಾಡುತ್ತಾ, ನಾನು ನರಿ ಇದ್ದಂಗೆ. ನರಿ ಹೇಗೆ ದೊಡ್ಡ ದೊಡ್ಡ ಪ್ರಾಣಿಗಳ ಜೊತೆ ಬುದ್ಧಿವಂತಿಕೆಯಿಂದ ಹೋರಾಡಿತೋ ಅದೇ ರೀತಿಯ ಸಂದರ್ಭ ನನ್ನ ಜೀವನದಲ್ಲೂ ಒದಗಿ ಬಂತು ಎಂದರು.
ಬೇರೆಯವರು ತಿರಸ್ಕರಿಸಿದ ಚಿತ್ರಗಳ ಬಗ್ಗೆ ನಾನು ತಿಳಿದುಕೊಂಡು ಕಲ್ಲೆಸೆಯುತ್ತಿದ್ದೆ. ಅವು ಸುನಾಯಾಸವಾಗಿ ತಮ್ಮ ಬುಟ್ಟಿಗೆ ಬೀಳುತ್ತಿದ್ದವು ಎಂದು ಯಾವುದೇ ಮುಚ್ಚು ಮರೆ ಇಲ್ಲದೆ ಹೇಳಿದರು. ತಮ್ಮ ಗೆಲುವಿಗೆ ಈ ನರಿ ಬುದ್ಧಿಯೇ ಕಾರಣ ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಯಿತು.
ಕನ್ನಡ ಚಿತ್ರೋದ್ಯಮದಲ್ಲೇ ಭಾರಿ ಬಜೆಟ್ನ ಚಿತ್ರವಾಗಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ದೇಶಭಕ್ತಿ ಉಕ್ಕಿಸುವ ಈ ಚಿತ್ರವನ್ನು ಪ್ರತಿಯೊಬ್ಬ ಕನ್ನಡಿಗನು ನೋಡಬೇಕು. ಆಗಷ್ಟೇ ನಿರ್ಮಾಪಕ ಈ ರೀತಿಯ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲು ಸಾಧ್ಯ ಎಂಬ ಉದ್ದೇಶ ಅವರ ಮಾತುಗಳಲ್ಲಿ ವ್ಯಕ್ತವಾಯಿತು.
ಆಗಸ್ಟ್ 15ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಅಂದು ಸಂಗೊಳ್ಳಿರಾಯಣ್ಣ ಹುಟ್ಟಿದ ದಿನ ಜೊತೆಗೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಸತತ 135 ದಿನಗಳ ಚಿತ್ರೀಕರಣ ನಡೆದಿದ್ದು ಚಿತ್ರವನ್ನು ಅದ್ಭುತವಾಗಿ ತೆರೆಗೆ ತರುತ್ತಿರುವುದಾಗಿ ದರ್ಶನ್ ತಿಳಿಸಿದರು. ಸತತವಾಗಿ ಕತ್ತಿ ಝಳಪಿಸಿದ ಕಾರಣ ದರ್ಶನ್ ಕೀಲು ನೋವು ಕಾಣಿಸಿಕೊಂಡಿದೆಯಂತೆ. (ಏಜೆನ್ಸೀಸ್)


Click it and Unblock the Notifications











