ಸದಭಿರುಚಿಯ ಒಲವೇ ಮಂದಾರ ಅರ್ಧ ಶತಕ
ಸದಭಿರುಚಿಯ ಚಿತ್ರ 'ಒಲವೇ ಮಂದಾರ' ಅರ್ಧ ಶತಕ ಸಿಡಿಸಿದೆ. ಹೊಸತನದಿಂದ ಕೂಡಿದ ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿರುವುದು ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿ. ನಿರ್ಮಾಪಕ ಗೋವಿಂದುರಾಜು ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. 'ಒಲವೇ ಮಂದಾರ' ಸತ್ವಭರಿತಕತೆಯನ್ನು ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.
ರಂಗಭೂಮಿಯಲ್ಲಿ ಪಳಗಿದ ಜಯತೀರ್ಥ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ನಿರ್ಮಾಪಕರ ಮಗ ಶ್ರೀಕಾಂತ್ ಹಾಗೂ ನಾಯಕಿ ಆಕಾಂಕ್ಷ ಅವರಿಗೆ ಇದು ಚೊಚ್ಚಲ ಚಿತ್ರ. ಈ ಚಿತ್ರದ ಮೂಲಕ ಜಯತೀತೀರ್ಥರು ಪ್ರೀತಿಯ ಹಲವು ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಚಿತ್ರದಲ್ಲಿ ಸತ್ಯ ಘಟನೆ ಆಧರಿಸಿದ ಎರಡು ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತವೆ.
ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಚಿತ್ರ ಅರ್ಧ ಶತಕ ಬಾರಿಸಿದ್ದ್ದು ಯಾವುದೇ ಕಾರಣಕ್ಕೂ ಶತಕ ವಂಚಿತವಾಗುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಕಾರಣ ರಾಜ್ಯದಾದ್ಯಂತ 25 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
ಚಿತ್ರದ ಯಶಸ್ಸು ಶ್ರೀಕಾಂತ್ ಅವರನ್ನು ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುವಂತೆ ಮಾಡಿವೆ. ಆದರೆ ಅವರು ಯಾವುದಕ್ಕೂ ಆತುರ ತೋರದೆ ಸತ್ವಭರಿತ ಪಾತ್ರಕ್ಕಾಗಿ ನಿರೀಕ್ಷಿಸುತ್ತಿದ್ದಾರೆ. ತಮ್ಮ ಮುಂದಿನ ಚಿತ್ರವನ್ನು ಗೋವಿಂದರಾಜು ಅವರೇ ನಿರ್ಮಿಸುತ್ತಾರೋ ಅಥವಾ ಬೇರೆಯವರ ನಿರ್ಮಾಣದಲ್ಲಿ ಅಭಿನಯಿಸುತ್ತಾರೋ ಎಂಬುದನ್ನು ಕಾಲವೇ ನಿರ್ಧರಿಸಬೇಕು.


Click it and Unblock the Notifications











