ಮತ್ತೆ ಮಂಜಿನಹನಿ ಶೇಖರಣೆಯಲ್ಲಿ ರವಿ

'ಮಂಜಿನಹನಿ' ಎಂಬ ಸುಂದರ ಹೆಸರಿಟ್ಟು ಹೊಸ ಬಗೆಯ ಚಿತ್ರ ಮಾಡಲು ರವಿ ಹೊರಟಾಗ ಅವರಿಗೆ ಸಾಥ್ ನೀಡಿ ಹಣದ ಹೊಳೆ ಹರಿಸಿದವರು ಸಂದೇಶ್ ನಾಗರಾಜ್ . ಆದರೆ ರವಿಚಂದ್ರನ್ ರ ಕ್ರೇಜಿತನಕ್ಕೆ ಬೆರಗಾಗಿ, ಹಣದಹೊಳೆಗೆ ಅಣೆಕಟ್ಟು ಕಟ್ಟೋಕೆ ಸಾಧ್ಯವಿಲ್ಲ ಎಂದೆನಿಸಿದ ಮೇಲೆ ಈ ಯೋಜನೆಯನ್ನು ಕೈಬಿಟ್ಟು ಹೊರನಡೆದಿದ್ದು ಹಳೆ ಕಥೆ. ಇತ್ತೀಚಿನ ಸುದ್ದಿ ಪ್ರಕಾರ ಈ ಚಿತ್ರದ ಚಿತ್ರೀಕರಣ ಮುಗಿದು ಆಗಲೇ ನಾಲ್ಕೈದು ತಿಂಗಳು ಕಳೆದಿವೆ. ಆದರೆ ಚಿತ್ರ ಅಂದುಕೊಂಡಂತೆ ಬಂದಿಲ್ಲ. ಇನ್ನೂ ಸ್ವಲ್ಪ ಬದಲಾವಣೆ ಮಾಡಿದರೆ ಹೇಗೆ ಎಂದೆನಿಸಿ, ಮತ್ತೆ ಬೇರೆ ಬೇರೆ ಕಡೆ ರೀ ಶೂಟ್ ಮಾಡೋಕೆ ರವಿ ಸಾಹೇಬ್ರು ಮುಂದಾಗಿದ್ದರಂತೆ.
ಕ್ರೇಜಿಸ್ಟಾರ್ ನ ಕ್ರೇಜಿತನ: ಈ ಚಿತ್ರವನ್ನು ಈಗಾಗಲೇ ಸಕಲೇಶಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಂಜಿನ ವಾತಾವರಣದಲ್ಲಿ ಚಿತ್ರೀಕರಿಸಲಾಗಿದೆ. ಬೆಂಗಳೂರಿನಲ್ಲಿ ಸೆಟ್ ಹಾಕಿ ಕೂಡ ಹಾಡು ಕುಣಿತ ಮಾಡಿದ್ದಾಗಿದೆ. ರವಿ ಜೊತೆ 'ಬಂಧು ಬಳಗ'ದಲ್ಲಿ ನಟಿಸಿದ ನಾಯಕಿ ಪೂನಂ ಕೌರ್ ಕುಣಿದು ಕುಪ್ಪಳಿಸಿ ತೆರಳಿದ್ದಾರೆ. ಕನ್ನಡ ನಟಿ ಚಾರುಲತಾ ಲಾಠಿ ಹಿಡಿದು ಈ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದು ಆಯ್ತು.
ಈಗ ಮತ್ತೊಮ್ಮೆ ಚಿತ್ರೀಕರಣ ಮಾಡಿದರೆ ಹಣ ಸುರಿಯಲು ಸಂದೇಶ್ ಅವರು ಜೊತೆಗಿಲ್ಲ. ರವಿ ತಮ್ಮ ಜೇಬಿನಿಂದಲೇ(ತಮ್ಮನ ಜೇಬಲ್ಲ) ಹಾಕಬೇಕು. ಚಿತ್ರದ ಹಕ್ಕನ್ನು 4.5 ಕೋಟಿ ನೀಡಿ ತಮ್ಮದಾಗಿಸಿಕೊಂಡಿದ್ದಾರಂತೆ. ಚಿತ್ರಕ್ಕೆ ಈಗ ಅವರೇ ಅಧಿನಾಯಕ ಸ್ಸಾರಿ ನಾಯಕ, ಸಂಗೀತ ನಿರ್ದೇಶಕ, ನಿರ್ಮಾಪಕ ಹಾಗು ಇತ್ಯಾದಿ. ಇದಲ್ಲದೆ ತಮ್ಮ ಅಂಕಲ್ ಲುಕ್ ಬದಲಿಸಿ ಸುಮಾರು ಕ್ಯಾಲೋರಿ ಕಮ್ಮಿ ಮಾಡಿಕೊಂಡಿದ್ದ ರವಿ , ಜಿಮ್ ಗೆ ಹೋಗದೆ ಸ್ವಲ್ಪ ಊದಿರುವುದು ಕಷ್ಟಕ್ಕೆ ಬಂದಿದೆ. ಈಗ ಮತ್ತೆ ಸಣ್ಣಗಾಗಬೇಕು.
ಎಲ್ಲವನ್ನು ಬೇಗ ಮಾಡಬೇಕು ಇಲ್ಲವಾದರೆ ಬೇಸಿಗೆ ಬಂದರೆ ಮಂಜಿನ ಹನಿ ಹುಡುಕಿಕೊಂಡು ಸಕಲೇಶಪುರವಲ್ಲ ಕಾಶ್ಮೀರದೆಡೆಗೆ ಹೋಗಬೇಕಾದೀತು ಎಂದು ಮುಸಿಮುಸಿ ನಗುತ್ತಿದ್ದಾರೆ ಮಂದಿ. ತಲೆ ಕೆಟ್ಟರೆ ಅದು ಎಷ್ಟು ದೂರ ಅಲ್ಲಿಗೂ ಹೋಗ್ತೀನಿ ಅನ್ನುವವರೆ ನಮ್ಮ ಕ್ರೇಜಿಸ್ಟಾರ್. ಅವರ ಎಲ್ಲ ತಾಳಕ್ಕೆ ಪಕ್ಕವಾದ್ಯವಾಗಿ ಕೋತಿ , ಕುರಿ ಖ್ಯಾತಿಯ ಮೋಹನ್ ಇದ್ದಾರೆ. ಬೇಸಿಗೆ ಮುಗಿದು ಮಳೆಗಾಲಗೊಳಗೆ ತೆರೆಯ ಮೇಲೆ ಮಂಜಿನ ಹನಿ ಸುರಿಯುವುದಂತೂ ಸತ್ಯ ಎಂಬುದು ರವಿ ಆಶ್ವಾಸನೆ.
ಇದನ್ನೂ ಓದಿ: ಬೇಜವಾಬ್ದಾರಿ ಯುವಕರ ಚಿತ್ರ 'ಟಾಟಾ ಬಿರ್ಲಾ'!
ಇದನ್ನು ನೋಡಿ: 47 ನೇ ಹುಟ್ಟುಹಬ್ಬದ ದಿನ ರವಿ ಹೀಗಿದ್ರು


Click it and Unblock the Notifications











