ಪರೀಕ್ಷೇಲಿ ಡುಮುಕಿ, ಜೀವನದಲಿ ಪಾಸಾದ ನಟರು
ಪರೀಕ್ಷೆಗಿಂತ ಜೀವನ ದೊಡ್ಡದು. ಸತ್ತು ಸಾಧಿಸುವಂತಹದ್ದು ಏನೂ ಇಲ್ಲ.ಈಸಬೇಕು ಇದ್ದು ಜಯಿಸಬೇಕು ಎಂದು ದಾಸರು ಹೇಳಿಲ್ಲವೆ. ಇಷ್ಟೆಲ್ಲಾ ಪುಂಗಿ ಯಾಕೆ ಎಂದಿರಾ. ಏನಿಲ್ಲಾ ರೀ ಪರೀಕ್ಷೆಯಲ್ಲಿ ಫೇಲಾದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ತಾವೂ ಕೂಡ ಪರೀಕ್ಷೆಯಲ್ಲಿ ಡುಮುಕಿ ಹೊಡೆದಿದ್ದೀವಿ ಎಂದು ಎದೆತಟ್ಟಿ ಹೇಳುತ್ತಿದ್ದಾರೆ ಕನ್ನಡ ಚಿತ್ರರಂಗದ ಕೆಲವು ತಾರೆಗಳು.
ಪರೀಕ್ಷೇಲಿ ಡುಮುಕಿ ಹೊಡೆದ ನಾವು ಹಲವಾರು ಬಾರಿ ದಂಡಯಾತ್ರೆಗಳನ್ನು ಮಾಡಲಿಲ್ಲವೆ. ಕಡೆಗೂ ಜೀವನದಲ್ಲಿ ನಮ್ಮದೇ ಆದಂತಹ ಐಡೆಂಟಿಯನ್ನು ಪಡೆಯಲಿಲ್ಲವೆ. ನಾವೂ ಆತ್ಮಹತ್ಯೆಗೆ ಶರಣಾಗಿದ್ದಿದ್ದರೆ ಇಂದು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತೆ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದಾರೆ ದುನಿಯಾ ವಿಜಯ್, ಜೋಗಿ ಪ್ರೇಮ್ ಹಾಗೂ ಕನ್ನಡ ಚಿತ್ರರಂಗದ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್.
'ಜೋಗಿ' ಖ್ಯಾತಿಯ ಪ್ರೇಮ್ ಎಸ್ಸೆಸ್ಸೆಲ್ಸಿಯಲ್ಲಿ ಡುಮುಕಿ ಹೊಡೆದು ಮನೆಬಿಟ್ಟು ಓಡಿಬಂದಿದ್ದರಂತೆ. ಬಳಿಕ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದರು ಎಂಬುದು ಇತಿಹಾಸ. ದಯವಿಟ್ಟು ಡುಮುಕಿ ಹೊಡೆದಿದ್ದೀವಿ ಎಂದು ದುಡುಕಿ ಯಾರೂ ಆತ್ಮಹತ್ಯೆಗೆ ಮುಂದಾಗಬೇಡಿ. ಪರೀಕ್ಷೆಯಲ್ಲಿ ಫೇಲಾದರೆ ಏನಂತೆ. ಜೀವನ ದೊಡ್ಡದು ಎಂದಿದ್ದಾರೆ.
ಇನ್ನು ದುನಿಯಾ ವಿಜಯ್ ಕೂಡ ಅಷ್ಟೆ ದಂಡಯಾತ್ರೆಗಳ ವೀರ. ಅವರು ಎಸ್ಸೆಸ್ಸೆಲ್ಸಿ ಫೇಲು. ನಾನು ಆಹೊತ್ತು ಆತ್ಮಹತ್ಯೆಗೆ ಶರಣಾಗಿದ್ದರೆ ಈ ಹೊತ್ತು ಹೆಸರು ಮಾಡಲು ಸಾಧ್ಯವಾಗುತ್ತಿತ್ತೇ. ಜೀವನದಲ್ಲಿ ಪರೀಕ್ಷೆನೇ ದೊಡ್ಡದಲ್ಲ. ಆತ್ಮಹತ್ಯೆಯಂತಹ ಮಹಾ ತಪ್ಪನ್ನು ಮಾಡಬೇಡಿ ಎಂದಿದ್ದಾರೆ. ಫೇಲಾದಾಗ ನನಗೂ ಅಷ್ಟೇ ನಿರಾಶೆಯಾಗಿತ್ತು. ಮತ್ತೆ ಪಾಸಾಗಿ ಜೀವನದಲ್ಲಿ ಸಾಧಿಸಲಿಲ್ಲವೆ? ಎಂದು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರೂ ಪಿಯುಸಿಯಲ್ಲಿ ಫೇಲ್ ಆದವರೆ. ಒಂದು ಕ್ಷಣ ವಿಚಲಿತರಾದ ಅವರಿಗೂ ಆತ್ಮಹತ್ಯೆಯಂತಹ ಯೋಚನೆ ಬಂದಿತ್ತಂತೆ. ಆದರೆ ವಿವೇಚನೆ ಕಳೆದುಕೊಳ್ಳಲಿಲ್ಲ. ಇಂದು ಅವರು ಚಿತ್ರರಂಗದಲ್ಲಿ ತಮ್ಮದೇ ಆದಂತಹ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಜೀವನದಲ್ಲಿ ನಿಮಗೇನು ಇಷ್ಟವೋ ಅದನ್ನು ಮಾಡಿ. ದುಡುಕಿ ಆತ್ಮಹತ್ಯೆಗೆ ಮಾತ್ರ ಶರಣಾಗಬೇಡಿ ಎಂದುಬು ಅವರ ಕಿವಿಮಾತು.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್, ನಿರ್ಮಾಪಕ ಕೆ ಮಂಜು ಕೂಡ ಎಸ್ಸೆಸ್ಸೆಲ್ಸಿ ಫೇಲಾದವರು. ನಾವೆಲ್ಲಾ ಇದ್ದ್ದು ಸಾಧಿಸಿಲ್ಲವೆ. ನಾವೆಲ್ಲಾ ಪರೀಕ್ಷೆಯಲ್ಲಿ ಸೋತಿದ್ದೇವೆ ಅಷ್ಟೆ. ಜೀವನದಲ್ಲಿ ಸೋತಿಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ಈಗ ಫೇಲಾದರೆ ಮತ್ತೆ ಪರೀಕ್ಷೆಯಿದೆಯಲ್ಲ. ಆಗ ಪ್ರಯತ್ನಿಸಿ. ಪರೀಕ್ಷೆ ಮತ್ತೆ ಬರುತ್ತೆ ಎಂಬುದು ಇವರ ಒಟ್ಟಾರೆ ಸಂದೇಶ. (ಏಜೆನ್ಸೀಸ್)
;

Click it and Unblock the Notifications











