'ಉಲ್ಲಾಸ ಉತ್ಸಾಹ'ಕ್ಕೆ ಗಣೇಶ್, ಯಾಮಿ ಹೆಜ್ಜೆ
ಖ್ಯಾತ ನಟ ಗಣೇಶ್ ಅಭಿನಯದಲ್ಲಿ ಮೂಡಿಬರುತ್ತಿರುವ ಚಿತ್ರ 'ಉಲ್ಲಾಸ ಉತ್ಸಾಹ'. ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ಈ ಚಿತ್ರಕ್ಕೆ ಪ್ರಸ್ತುತ ಮುತ್ತಿನ ನಗರ ಹೈದರಾಬಾದ್ನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆದಿದೆ.
'ಮುಂಗಾರು ಮಳೆ'ಗೆ ಮಧುರ ಗೀತೆಗಳನ್ನು ಬರೆದು ಜನಪ್ರಿಯರಾದ ಜಯಂತ ಕಾಯ್ಕಿಣಿ ಅವರು ರಚಿಸಿರುವ 'ಚಲಿಸುವ ಚೆಲುವೆ ನಾಹೇಳಲೇ ಬೇಕೆಂದ ವಿಷಯ ಮರೆತೆ ಹೋಯಿತಲ್ಲಾ ನಿನ್ನ ಮುಂದೆ' ಹಾಗೂ ಕವಿರಾಜ್ ರಚಿಸಿರುವ ಚಕೋರಿ ಚಕೋರಿ ಚಕೋರಿ ಕೈ ಜಾರಿ ಹೋಗಬೇಡ ಓ ನನ್ನ ಬಂಗಾರಿ' ಎಂಬ ಗೀತೆಗಳ ಚಿತ್ರೀಕರಣದಲ್ಲಿ ಗಣೇಶ್ ಮತ್ತು ಯಾಮಿಗೌತಮಿ ಪಾಲ್ಗೊಂಡಿದ್ದರು. ಈ ಗೀತೆಗಳಿಗೆ ಪ್ರದೀಪ್ ಅಂಥೋನಿ ಹಾಗೂ ಮನೋಜ್ ನೃತ್ಯ ಸಂಯೋಜಿಸಿದ್ದಾರೆ.
ಕನ್ನಡದವರಾದ ಯಶೋಸಾಗರ್ ಹಾಗೂ ಸ್ನೇಹಾ ಉಲ್ಲಾಳ್ ಅಭಿನಯದಲ್ಲಿ ತೆಲುಗು ಭಾಷೆಯಲ್ಲಿ ಮೂಡಿ ಬಂದು ಯಶಸ್ವಿಯಾದ ಚಿತ್ರ 'ಉಲ್ಲಾಸಂಗ ಉತ್ಸಾಹಂಗ'. ಇದೇ ಚಿತ್ರ ಕನ್ನಡದಲ್ಲಿ 'ಉಲ್ಲಾಸ ಉತ್ಸಾಹ' ಶೀರ್ಷಿಕೆಯಿಂದ ಹೊರಹೊಮ್ಮುತ್ತಿದೆ. ಕಾಂತಿಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತನಾಮರ ಬಳಿ ಸಹಾಯಕರಾಗಿದ್ದ ದೇವರಾಜ್ಪಾಲನ್ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಹದಿಹರೆಯದ ಹುಡುಗರ ಹುಡುಗಾಟ ಹಾಗೂ ಆ ಹುಡುಗಾಟದಲ್ಲಿ ಹುಟ್ಟುವ ಪ್ರೀತಿ, ಅದರ ಪೋಷಣೆ ಹೀಗೆ ಹಲವು ಸ್ವಾರಸ್ಯಕರ ಘಟನೆಗಳನ್ನೊಳಗೊಂಡ ಈ ಚಿತ್ರಕ್ಕೆ ಕರುಣಾಕರನ್ ಕತೆ ಬರೆದಿದ್ದಾರೆ. ಜಿ.ವಿ.ಪ್ರಕಾಶ್ಕುಮಾರ್ ಸಂಗೀತ, ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಪಿ.ಆರ್.ಸೌಂದರ್ರಾಜ್ ಸಂಕಲನ, ಇಮ್ರಾನ್ ನೃತ್ಯ, ರವಿಶಂಕರ್,ದತ್ತಣ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರ್ರದ ತಾರಾಬಳಗದಲ್ಲಿ ಗಣೇಶ್, ಯಾಮಿಗೌತಮಿ, ರಂಗಾಯಣರಘು, ಸಾಧುಕೋಕಿಲಾ, ತುಳಸಿಶಿವಮಣಿ, ಪ್ರೀತಿಚಂದ್ರಶೇಖರ್, ದೊಡ್ಡಣ್ಣ, ವಿಶ್ವ, ಮಿತ್ರ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











