ಕಳ್ಳರ ಸಂತೆ ಚಿತ್ರಕ್ಕೆ ಡಬ್ಬಿಂಗ್ ಮುಕ್ತಾಯ
ಮೇಘ ಮೂವೀಸ್ ಲಾಂಛನದಲ್ಲಿ ಸೈಯ್ಯದ್ ಅಮಾನ್ ಹಾಗೂ ರವೀಂದ್ರ ಅವರು ನಿರ್ಮಿಸುತ್ತಿರುವ 'ಕಳ್ಳರ ಸಂತೆ ಚಿತ್ರಕ್ಕೆ ಆಕಾಶ್ ಸ್ಟೂಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ಸದಭಿರುಚಿ ಚಿತ್ರಗಳನ್ನು ನಿರ್ಮಿಸುತ್ತಿರುವ ಈ ಸಂಸ್ಥೆ ತನ್ನ ಮೂರನೇ ಕಾಣಿಕೆಯಾಗಿ 'ಕಳ್ಳರ ಸಂತೆ ಚಿತ್ರವನ್ನು ನಿರ್ಮಿಸುತ್ತಿದೆ.
'ಆ ದಿನಗಳು' ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ನಿರ್ವಹಿಸಿದ ಸುಮನಾ ಕಿತ್ತೂರು 'ಸ್ಲಂಬಾಲ" ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕಿಯಾದರು. ಈಗ ಅವರು ನಿರ್ದೇಶಿಸುತ್ತಿರುವ ಚಿತ್ರ 'ಕಳ್ಳರ ಸಂತೆ. ಈ ಚಿತ್ರ ಕೂಡ ಉತ್ತಮ ಚಿತ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದು ನಿರ್ದೇಶಕರು ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ.
ವಿ.ಮನೋಹರ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿದೆ. ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುವ ಈ ಚಿತ್ರ ನೋಡುಗರನ್ನು ರಂಜಿಸಲಿದೆ. ಅಗ್ನಿಶ್ರೀಧರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಸುಂದರನಾಥ ಸುವರ್ಣ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಸುಮನಾ ಕಿತ್ತೂರು ಹಾಗೂ ವಿ.ಮನೋಹರ್ ಗೀತರಚನೆ, ಡಿಪರೆಂಟ್ ಡ್ಯಾನಿ ಸಾಹಸ, ಮದನ್ ಹರಿಣಿ ನೃತ್ಯ ಹಾಗೂ ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಹರಿಪ್ರಿಯ, ಕಿಶೋರ್, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











