ನಿರ್ಮಾಪಕರ ಸಂಘಕ್ಕೆ ಜಾಡಿಸಿದ ರಾಜ್ ಕುಟುಂಬ
ಕನ್ನಡ ಚಿತ್ರರಂಗದಲ್ಲಿ ದರ್ಶನ್ ಬಗ್ಗೆ ಇಷ್ಟೆಲ್ಲಾ ಹಾದಿಬೀದಿ ರಂಪವಾಗುತ್ತಿದ್ದರೂ ಡಾ.ರಾಜ್ ಕುಟುಂಬ ವರ್ಗ ಎಲ್ಲಿ? ಅವರು ಯಾಕೆ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಲಿಲ್ಲ ಎಂಬುದು ಹಲವರ ಪ್ರಶ್ನೆಯಾಗಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಹಾಗೂ ಪುನೀತ್ ರಾಜ್ ಕುಮಾರ್ ಒಟ್ಟಿಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರಿನಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡುತ್ತಾ, ನಿಖಿತಾ ವಿರುದ್ಧದ ಕ್ರಮ ಸರಿಯಲ್ಲ. ಹಿರಿಯ ಕಲಾವಿದರೊಂದಿಗೆ ಚರ್ಚಿಸಿ ಚಲನಚಿತ್ರ ನಿರ್ಮಾಪಕರ ಸಂಘ ಈ ನಿರ್ಧಾರಕ್ಕೆ ಬರಬೇಕಾಗಿತ್ತು. ಆತುರಗೇಡಿ ನಿರ್ಧಾರಕ್ಕೆ ಬರಬಾರದಾಗಿತ್ತು. ನಿಖಿತಾ ವಿರುದ್ಧ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು ಬೇಜಾಬ್ದಾರಿ ಕ್ರಮ ಎಂದು ಶಿವಣ್ಣ ಖಂಡಿಸಿದ್ದಾರೆ.
ಕಲಾವಿದರ ಮೇಲೆ ನಿಷೇಧ ಹೇರುವುದು ಬೇಜಾಬ್ದಾರಿ ವರ್ತನೆ. ಕೂಡಲೆ ನಿಖಿತಾ ಮೇಲಿನ ನಿಷೇಧವನ್ನು ಹಿಂಪಡೆಯಬೇಕು. ಹಾಗೆಯೇ ಯಾರದೇ ಖಾಸಗಿ ವಿಚಾರಗಳಲ್ಲಿ ಮೂಗು ತೂರಿಸುವುದನ್ನೂ ಬಿಡಬೇಕು. ನಮ್ಮ ಚಿತ್ರೋದ್ಯಮವನ್ನು ನೋಡಿ ಬೇರೆಯವರು ನಗುವಂತಾಗಬಾರದು ಎಂದು ರಾಘವೇಂದ್ರ ರಾಜ್ ಕುಮಾರ್ ನಿರ್ಮಾಪಕರ ಸಂಘಕ್ಕೆ ಜಾಡಿಸಿದ್ದಾರೆ.


Click it and Unblock the Notifications











