ಸೀರೆ ಉಟ್ಟುಕೊಂಡಿದ್ದ ನಮಿತಾ ಬಂಧನ
ಶಾಶ್ವತವಾಗಿ ಉಳಿಯುವುದು ಬದಲಾವಣೆ ಮಾತ್ರ ಎಂಬ ಸುಭಾಷಿತವೊಂದಿದೆ.ಈ ಜಗತ್ತಿನಲ್ಲಿ ಯಾರೂ ,ಯಾವುದೂ ಶಾಶ್ವತವಲ್ಲ ಎಂದು ಒತ್ತಿಹೇಳುವ ವಿವೇಕದ ಮಾತದು.ಈ ವಿವೇಕದ ಮಾತು ಎಲ್ಲ ಹುಲುಮಾನವರಿಗೂ ಅನ್ವಯಿಸುತ್ತದೆ.ಅಂಥ ವಿವೇಕಕ್ಕೆ ಪ್ರಾತ್ಯಕ್ಷಿಕೆಯೋ ಎಂಬಂತೆ ಒಂದು ಬೆಳವಣಿಗೆ ಉಂಟಾಗಿದೆ.ಈಗ ತಾನೆ ಬಂದಿರುವ ಆ ವರ್ತಮಾನದ ಪ್ರಕಾರ ದಕ್ಷಿಣ ಭಾರತದ ದೃಶ್ಯ ಬಾಂಬ್ ನಮಿತಾ ಅಗಾಧವಾಗಿ ಬದಲಾಗಿದ್ದಾರೆ.ಸುಭಾಷಿತವನ್ನು ನಿಜ ಮಾಡಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ.ಕಂಗ್ರಾಜುಲೇಷನ್ಸ್ ನಮಿತಾ ಅವರೆ.
ಶಾಮ್
ವಿಷಯ ಏನೆಂದರೆ,ಅರೆಬರೆ ಬಟ್ಟೆ ಬರೆ ತೊಟ್ಟುಕೊಂಡು ವಯ್ಯಾರ ಮಾಡುತ್ತಾ ನಟಿಸುವ ಈ ನಟಿಮಣಿ ಪಡ್ಡೆ ಹುಡುಗರನ್ನೂ,ಮಧ್ಯವಯಸ್ಕರನ್ನು ಹಲವು ವೇಳೆ ಮುಪ್ಪು ಆವರಿಸಿಕೊಂಡವರನ್ನೂ ಬೆಚ್ಚಿಬೀಳಿಸಿದ ಚರಿತ್ರೆ ಇದೆ.ಈ ಹೆಂಗಸು ಕಾಣಿಸಿಕೊಳ್ಳುವ ಭಂಗಿಗಳು ಆಕೆಯನ್ನು ಹಾಕಿಕೊಂಡು ಸಿನಿಮಾ ತೆಗೆದ ಯಾವ ನಿರ್ಮಾಪಕನನ್ನೂ ಘಾಸಿಗೊಳಿಸಿಲ್ಲ.ಇದು ಗ್ಯಾರಂಟಿ.ಟಿಕೆಟ್ ಕೊಂಡು ಚಿತ್ರಮಂದಿರಕ್ಕೆ ಹೋದ ಅವಳ ಯಾವ ಅಭಿಮಾನಿಯೂ ನಿರಾಶನಾಗಿ ಮಂದಿರದಿಂದ ಹೊರಬಂದಿಲ್ಲ,ಇದೂ ಗ್ಯಾರಂಟಿ.
ಸಿನಿಮಾ ಮುಖ್ಯವಾಗಿ ಕನಸುಗಳ ವ್ಯಾಪಾರ ಅಂತಾರೆ.ಸೀರೆಯನ್ನು ಸೊಂಟಕ್ಕೆ ಕಟ್ಟಿಕೊಂಡು ಕನಸುಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ದಕ್ಷಿಣ ಪ್ರಸ್ತ ಭೂಮಿಯುದ್ದಕ್ಕೂ ಮಾರಿದ ನಾರಿಮಣಿ ನಮಿತಾ. ಅದೆಲ್ಲ ಸರಿನೆ.ಆದರೆ ನಿಜ ಜೀವನದಲ್ಲೂ ಸೆಕ್ಸಿಯಾಗಿ ಬಟ್ಟೆ ಹಾಕಿಕೊಂಡು ಅಥವಾ ಹಾಕಿಕೊಳ್ಳದೆ ತಿರುಗಾಡುವ ಆಕೆಯ ಬೋಲ್ಡ್ ನೆಸ್ ಅನೇಕರ ಟೀಕೆಗೆ ಗುರಿಯಾದ್ದು ಸರ್ವವಿದಿತ.ಸಾರ್ವಜನಿಕ ಸಮಾರಂಭಗಳಿಗೂ ಆಕೆ ಅಷ್ಟೋ ಇಷ್ಟೋ ಬಟ್ಟೆ ಹಾಕಿಕೊಂಡು ಹೋಗುತ್ತಿದ್ದುದು ಹಿರಿಯರ ಆಕ್ರೋಶಕ್ಕೆ ಕಾರಣವಾಗಿತ್ತು.ನಮ್ಮ ಸಮಾಜದಲ್ಲಿ ಇಂಥ ನಡವಳಿಕೆಯನ್ನು ಸಾಮಾನ್ಯವಾಗಿ ಯಾರೂ ಸಹಿಸುವುದಿಲ್ಲ,ಅಲ್ವೇನ್ರೀ ?
ಮುದಿ ದ್ರಾವಿಡ ಎಂ.ಕರುಣಾನಿಧಿ ಅಧ್ಯಕ್ಷತೆ ವಹಿಸಿದ್ದ ಒಂದು ಕಾರ್ಯಕ್ರಮಕ್ಕೆ ಇತ್ತೀಚೆಗೆ ನಮಿತಾ ಹೋಗಿದ್ದರು.ಎಲ್ಲಾ ಸೇರಿದರೂ,ಹೇಗೆ ಅಳೆದರೂ ಒಟ್ಟಾರೆ ಒಂದು ಮೀಟರ್ ಉದ್ದವೂ ದಾಟದಷ್ಟು ಬಟ್ಟೆ ಧರಿಸಿಕೊಂಡು ಹೋಗಿದ್ದರು.ಆಕೆಯ ಅಭಿಮಾನಿಗಳಿಗೆ ಆ ದೃಶ್ಯಗಳು ಸಂತಸತಂದರೂ ಸಭ್ಯತೆಯ ಗೆರೆ ದಾಟಿದರೆ ಹೌಹಾರಿ ಬೀಳುವ ಮಂದಿ ನಮಿತಾ ವಿರುದ್ಧ ಕಿಡಿಕಾರಿದರು.
ಭಾರತೀಯ ಸಮಾಜದಲ್ಲಿ ನಿರಾತಂಕವಾಗಿ ಸಾಗುತ್ತಿರುವ ಭಾರತೀಯ ನಾರಿಯರ ಇಂಥ ರೀತಿನೀತಿಗಳಿಗೆ ಕಡಿವಾಣ ಹಾಕದಿದ್ದರೆ ಭಾರತೀಯತೆಯ ಗತಿಯೇನು?ಎಂದು ತಮಿಳುನಾಡಿನ ಶಾಸಕರು ಕೆರಳಿದರು.ಸಿನಿಮಾ ನಟಿಯರಿಗೆ ವಸ್ತ್ರ ಸಂಹಿತೆ ಎನ್ನುವುದೊಂದಿರಬೇಕು ಎಂದು ನಿಂತು ಕೂಗಾಡಿದರು.ಕೂಗಾಡುವುದಕ್ಕೋಸ್ಕರ ಒಂದು ಇಡೀ ದಿವಸದ ಶಾಸನ ಕಲಾಪಗಳನ್ನು ಮುಡಿಪಾಗಿಟ್ಟರು.ಸಭ್ಯತೆಯನ್ನು ಗೌರವಿಸುವ,ಆದರಿಸುವ ಜನತೆ ಭಲೆ ಭಲೆ ಶಾಸಕರೆ ಎಂದರು.
ಬಹುಶಃ ಈ ಪ್ರತಿರೋಧ ನಮಿತಾ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದೆ ಎಂದು ಕಂಡುಬರತ್ತೆ.ಮೊನ್ನೆ ಜರುಗಿದ ಒಂದು ರಿಯಾಲಿಟಿ ಡಾನ್ಸ್ ಕಾರ್ಯಕ್ರಮಕ್ಕೆ ನಮಿತಾ ಒಳ್ಳೆ ಚೂಡಿದಾರ್ ಧರಿಸಿಕೊಂಡು ಆಗಮಿಸಿದ್ದರಂತೆ. ಜನಕ್ಕೆ ಭೂಮ್ಯಾಕಾಶಗಳು ಒಂದಾದಹಾಗೆ ಆಶ್ಚರ್ಯವಾಯಿತು.ಅದಕ್ಕೆ ಉತ್ತರಿಸಿದ ನಮಿತಾ " ನನ್ನ ವಸ್ತ್ರ ವಿನ್ಯಾಸದ ಮೇಲೆ ಅನೇಕರಿಗೆ ಕಣ್ಣು ಬಿದ್ದಿದೆ. ತುಂಬಾ ಜನ ಟೀಕೆಗಳನ್ನೂ ಮಾಡುತ್ತಿದ್ದಾರೆ.ಆದ್ದರಿಂದ ನಾನು ಇನ್ನು ಮೇಲೆ ಮೈತುಂಬಾ ಬಟ್ಟೆ ಹಾಕಿಕೊಳ್ಳದೆ ಹೊರಗೆ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ" ಎಂದು ದುಖಃವೂ ಇಲ್ಲದ ಸಂತೋಷವೂ ಇಲ್ಲದ ತಮ್ಮ ನಿಲುವನ್ನು ಪ್ರಕಟಿಸಿದರಂತೆ.
ಇದೆಲ್ಲ ಸಭ್ಯತೆಯ ಮತ್ತು ಸಭ್ಯತೆಯ ಸೋಗು ಹಾಕುವ ಸಮಾಜದ ಶಾಸ್ತ್ರಗಳಾದವು.ಆದರೆ,ನಮಿತಾ ಎಂಬ ಹೆಸರು ಕಿವಿಗೆ ಬಿದ್ದರೆ ಸಾಕು ಪುಳಕಗೊಳ್ಳುವ ಆಕೆಯ ಭಾಷಾತೀತ ಆರಾಧಕರ ಗತಿಯೇನು? ಚೂಡಿದಾರ್,ಸೀರೆ ಧರಿಸಿಕೊಂಡು ಓಡಾಡುತ್ತಾರೆ ನಮಿತಾ ಮೇಡಂ ಎನ್ನುವ ಸುದ್ದಿ ಆಕೆಯ ಅಭಿಮಾನಿಗಳ ಕಣ್ಣಿಗೆ ಬಿದ್ದರೆ ಯಾರು ಹೊಣೆ ? ಆಕೆಯನ್ನು ನಂಬಿಕೊಂಡು ಕನಸುಗಳನ್ನು ಹೆಣೆದುಕೊಳ್ಳುವ ಗಂಡಸರಿಗೆ ಈ ಸುದ್ದಿ ಕೇಳಿ ಆಘಾತವಲ್ಲ,ಹೃದಯಾಘಾತವಾದರೂ ಆಶ್ಟರ್ಯಪಡಬೇಕಾಗಿಲ್ಲ.ಏನೇ ಆಗಲಿ, ನಾನಂತೂ ಹೊಣೆಯಲ್ಲ.
ಮೊನ್ನೆ ತಾನೆ ನನ್ನ ಮಿತ್ರ ಛಾಯಾಗ್ರಾಹಕ ಅರಿವಳಗನ್ ಆಕೆಯ ಮನೆಗೆ ಹೋಗಿದ್ದನಂತೆ.ಯಾವುದೋ ಕಾರ್ಯಕ್ರಮಕ್ಕೆ ಹೊರಡುವುದಕ್ಕೆ ನಮಿತಾ ಡ್ರೆಸ್ ಮಾಡಿಕೊಳ್ಳುತ್ತಿದ್ದರಂತೆ.ಅರಿವು ಆಕೆಯ ಡ್ರೆಸ್ಸಿಂಗ್ ರೂಂಗೆ ಹೋಗಿ ಈ ಚಿತ್ರ ಹೊಡಕೊಂಡು ಬಂದನಂತೆ.ನಮಿತಾ ನೀಡಿರುವ ಹೇಳಿಕೆಗೂ ಅವರ ಆವತ್ತಿನ ವೇಷಭೂಷಣಕ್ಕೂ ಎಷ್ಟೊಂದು ಸಾಮೀಪ್ಯ ಇದೆ ನೀವೇ ನೋಡಿ ! ನಮಿತಾ ಬದಲಾಗಿದ್ದಾರೆ. ನಿಜ, ನಿಜ. ಅವರಿಗೆ ಒಂದು ವ್ಯಾಲಂಟೈನ್ ಗ್ರೀಟಿಂಗ್ ಹೇಳೋಣಾ ಅಂತಲೂ ಅನ್ಸತ್ತೆ.


Click it and Unblock the Notifications











