ಕೆಎಂಎಫ್ ಪ್ರಚಾರ ರಾಯಭಾರಿ ಪುನೀತ್
ನಟ ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ಹಾಲು ಮಹಾಮಂಡಲಿ (ಕೆಎಂಎಫ್)ಉತ್ಪನ್ನಗಳ ಪ್ರಚಾರ ರಾಯಭಾರಿ ಆಗಲಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ ಪುನೀತ್ ಅವರು ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಈ ಬಗ್ಗೆ ವಿವರ ನೀಡಿರುವ ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ, ಮಹಾಮಂಡಲದ ಹಾಲು ಉತ್ಪನ್ನಗಳ ಮಾರಾಟ ಮತ್ತು ವಿಸ್ತರಣೆಗಾಗಿ ಪುನೀತ್ ಅವರ ಸೇವೆಯನ್ನು ಬಳಸಿಕೊಳ್ಳಲಿದ್ದೇವೆ. 'ಸ್ವಾಭಿಮಾನಿ ಕನ್ನಡಿಗರ ಹಾಲು' ಎಂಬ ಘೋಷ ವಾಕ್ಯವನ್ನು ಉತ್ಪನ್ನಗಳ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದರು.
ಮೊದಲಿಂದಲೂ ತಾವು ಡಾ.ರಾಜ್ ಕುಮಾರ್ ಅವರ ಅಭಿಮಾನಿ. ಕೆಎಂಎಫ್ ಉತ್ಪನ್ನಗಳ ಪ್ರಚಾರಕ್ಕಾಗಿ ಅವರ ಕುಟುಂಬದವರನ್ನು ಬಳಸಿಕೊಳ್ಳಬೇಕು ಎಂಬ ಆಲೋಚನೆ ಇತ್ತು. ಶಿವರಾಜ್ ಕುಮಾರ್ ಅವರ ಹೆಸರು ಪರಿಗಣನೆಗೆ ಬಂದಿತ್ತು, ಅಂತಿಮವಾಗಿ ಪುನೀತ್ ಹೆಸರನ್ನು ಸೂಚಿಸಲಾಗಿದೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.
ಅವರು ಯಾವುದೇ ಸಂಭಾವನೆ ಪಡೆಯದೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಜನಪ್ರಿಯ ನಟರೊಬ್ಬರನ್ನು ಕೆಎಂಎಫ್ ಪ್ರಚಾರ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ರೆಡ್ಡಿ ಈ ಹಿಂದೆ ಮಾಹಿತಿ ನೀಡಿದ್ದರು. ಆದರೆ ನಟ ಯಾರು ಎಂಬುದನ್ನು ಗುಟ್ಟಾಗಿ ಇಟ್ಟಿದ್ದರು. ಇದೀಗ ಪುನೀತ್ ಅವರನ್ನು ಆಯ್ಕೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.
(ದಟ್ಸ್ ಕನ್ನ್ನಡ ಚಿತ್ರವಾರ್ತೆ)


Click it and Unblock the Notifications











