ಅಂತು ಇಂತು 'ರಾಜ್' ಚಿತ್ರೀಕರಣ ಮುಕ್ತಾಯ
ಕನ್ನಡ ಚಿತ್ರೋದ್ಯಮದಲ್ಲಿ ತೀವ್ರಕುತೂಹಲ ಮೂಡಿಸಿರುವ 'ರಾಜ್ ದ ಶೋಮ್ಯಾನ್' ಚಿತ್ರೀಕರಣ ಮುಕ್ತಾಯವಾಗಿದೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಕ್ಲಿಷ್ಟಕರ ಸನ್ನಿವೇಶಗಳಿಂದ ಪಾರಾಗಿ ಬಂದಿದೆ. ದಕ್ಷಿಣಾ ಆಫ್ರಿಕಾದಲ್ಲಿ 'ಹೇ ಪಾರು...' ಹಾಗೂ 'ಪೋಲಿ ಇವನು...' ಹಾಡನ್ನು ಲಡಾಖ್ ನಲ್ಲಿ ಚಿತ್ರೀಕರಿಸಲಾಗಿದೆ.
''ಹಿಂದಿಯ 'ಕಭಿ ಖುಷಿ ಕಭಿ ಘಮ್'ಗಿಂತಲೂ ಸುಂದರವಾಗಿ ಲಡಾಖ್ ನ್ನು ಸೆರೆಹಿಡಿದಿದ್ದೇವೆ . ತಮ್ಮ ಚಿತ್ರದಲ್ಲಿ ಮಂಜು ಮುಸಿಕಿದ ಬೆಟ್ಟಗಳನ್ನು ಸೆರೆಹಿಡಿಯಲು ಸ್ಥಳೀಯ ಗೈಡ್ ಸಹಾಯದಿಂದ ಲಡಾಖ್ ಗೆ ಹೋಗಿದ್ದೆವು. ಅಷ್ಟು ಎತ್ತರಕ್ಕೆ ಹೋದರೆ ಆಮ್ಲಜನಕದ ಕೊರತೆ ಇರುತ್ತೆ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಚಿತ್ರೀಕರಣ ಮಾಡಿ ಎಂಬ ಸಲಹೆ ಸೂಚನೆಗಳನ್ನು ನಮ್ಮ ಗೈಡ್ ಕೊಟ್ಟಿದ್ದ'' ಎನ್ನುತ್ತಾರೆ ಪ್ರೇಮ್.
ಆದರೆ ನಾವು ಯಾವುದೇ ರೀತಿಯಲ್ಲೂ ಸಿದ್ಧರಾಗದೆ ಚಿತ್ರೀಕರಣ ಸ್ಥಳಕ್ಕೆ ಹೋಗಿದ್ದೆವು. ಮೌಂಟ್ ಎವರೆಸ್ಟ್ ಗಿಂತ 100 ಅಡಿ ಕೆಳಗಿದ್ದೆವು ಅಷ್ಟೇ. ಹಾಡಿನ ಒಂದು ಭಾಗವನ್ನು ಚಿತ್ರೀಕರಿಸಿದೆವು. ಮುಂದಿನ ಭಾಗ ಚಿತ್ರೀಕರಿಸಬೇಕಾದರೆ ಚಿತ್ರತಂಡದ ಒಬ್ಬೊಬ್ಬರೆ ಪ್ರಜ್ಞೆ ತಪ್ಪಿ ಬೀಳುವಂತಾಯಿತು. ನಿಶಾ ಕೋಠಾರಿ ಅವರ ತಾಯಿ ಸಹ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು ಎಂದು ಘಟನೆಯನ್ನು ಪ್ರೇಮ್ ವಿವರಿಸಿದರು.
ಅದೃಷ್ಟವಶಾತ್ ಪುನೀತ್ ರಾಜ್ ಕುಮಾರ್ ಗೆ ಯಾವುದೇ ತೊಂದರೆ ಆಗಲಿಲ್ಲ.ಆ ಹಾಡಿನಲ್ಲಿ ಪುನೀತ್ ಅದ್ಭುತವಾಗಿ ಅಭಿನಯಿಸಿದರು. ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಿ ಸುರಕ್ಷಿತ ಸ್ಥಳಕ್ಕೆ ಹೊರಟೆವು.ಅಲ್ಲೇ ಸನಿಹದಲ್ಲಿದ್ದ ಆರ್ಮಿ ಕ್ಯಾಂಪ್ ನಲ್ಲಿ ಚಿಕಿತ್ಸೆ ತೆಗೆದುಕೊಂಡು ಚಿತ್ರೀಕರಣವನ್ನು ಮುಗಿಸಿದೆವು.ಚಿತ್ರತಂಡದ ಸಹಕಾರ ನಿಜಕ್ಕೂ ಮರೆಯುವಂತಿಲ್ಲ. ಖ್ಯಾತ ನಿರ್ದೇಶಕ ಮಣಿರತ್ನಂರ ದಿಲ್ ಸೆ ಚಿತ್ರದ ಹಾಡನ್ನ್ನು ಇಲ್ಲೇ ಚಿತ್ರೀಕರಿಸಿದ್ದಾರೆ ಎಂಬ ವಿವರಗಳನ್ನು ಪ್ರೇಮ್ ನೀಡಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











