ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಪ್ರೀತಿ ಹಂಚಿದ ರಮ್ಯಾ
ನಗರದ ಪ್ರೇಮಿಗಳೆಲ್ಲ ಕೆಂಗುಲಾಬಿಗಳ ಪ್ರೇಮದ ಧ್ಯಾನದಲ್ಲಿ ಮುಳುಗಿರುವ ಸಂದರ್ಭದಲ್ಲಿ ನಟಿ ರಮ್ಯಾ ಹಾಗೂ ಗೀತರಚನೆಕಾರ ಕೆ.ಕಲ್ಯಾಣ್ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿದ್ದರು. ಅವರದ್ದು ಎದೆಯಿಂದ ಎದೆಗೆ ಪ್ರೇಮವನ್ನು ಹಂಚುವ ಕೆಲಸ.
ರಮ್ಯಾ ಮತ್ತು ಕಲ್ಯಾಣ್ ಪಾಲಿಗೆ ಪ್ರೇಮಿಗಳ ದಿನ ವಿಶಿಷ್ಟವಾಗಿ ಪರಿಣಮಿಸಿತ್ತು. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಸುಮಾರು 300 ರೋಗಿಗಳೊಂದಿಗೆ ಕೆಲವು ಸಮಯ ಕಳೆದ ಇಬ್ಬರು ಕಲಾವಿದರು, ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳಿದರು. ಪುಟಾಣಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು- ಎಲ್ಲರೂ ಸಿನಿಮಾ ಮಂದಿಯ ಕಣ್ತುಂಬಿಕೊಂಡರು. ಮಾತನಾಡಿಸಿ ಪುಳಕಗೊಂಡರು. ರೋಗ ಉಲ್ಬಣಗೊಂಡು ಜೀವದ ಆಸೆ ಬಿಟ್ಟವರೂ ಗುಂಪಿನಲ್ಲಿದ್ದರು.
ಕಲ್ಯಾಣ್ ಜೊತೆಗೆ ಮಕ್ಕಳ ಪುಟ್ಟದೊಂದು ಬಳಗವೂ ಇತ್ತು. ಇವರು ಕ್ಯಾನ್ಸರ್ ರೋಗಿಗಳಿಗೆ ಶುಭಾಶಯ ಪತ್ರಗಳನ್ನು ನೀಡಿ ಶುಭ ಹಾರೈಸಿದರು. ತಳವರ್ಗದ ಮಕ್ಕಳು ರೂಪಿಸಿದ ಶುಭಾಶಯ ಪತ್ರಗಳವು! ಅಂದಹಾಗೆ, ಕಲ್ಯಾಣ್ ಮತ್ತು ರಮ್ಯ ಅವರನ್ನು ಕಿದ್ವಾಯಿ ಅಂಗಳಕ್ಕೆ ಕರೆತಂದಿದ್ದು ಯುವ ಬೆಂಗಳೂರು ಎನ್ನುವ ಸ್ವಯಂ ಸೇವಾ ಸಂಸ್ಥೆ. ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯುವ ಬೆಂಗಳೂರು- ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸಿನಿಮಾ ಮಂದಿಯನ್ನು ಕ್ಯಾನ್ಸರ್ ಆಸ್ಪತ್ರೆಗೆ ಕರೆತಂದಿತ್ತು.


Click it and Unblock the Notifications











