ಮಾಸಾಂತ್ಯಕ್ಕೆ ಖೇಣಿ, ಪಾಟೀಲರ 'ಸೆಲ್ಯೂಟ್'
ಓಂ ಶಕ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಸೆಲ್ಯೂಟ್ ಚಿತ್ರ ಈ ತಿಂಗಳ ಅಂತ್ಯದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಬಿ.ಸಿ.ಪಾಟಿಲ್ ತಿಳಿಸಿದ್ದಾರೆ. ಆಗಸ್ಟ್ 14ರಂದೇ ಸೆಲ್ಯೂಟ್ ಬಿಡುಗಡೆಯಾಗಬೇಕಿತ್ತು. ರಾಜ್ಯದಲ್ಲಿ ಉಪ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 'ಸೆಲ್ಯೂಟ್' ಚಿತ್ರಕ್ಕೆ ತಡೆಯೊಡ್ಡಿತ್ತು.
ಪೊಲೀಸ್ ಅಧಿಕಾರಿಯಾಗಿ ನಂತರ ಕಲಾವಿದನಾಗಿ ಹಾಗೂ ರಾಜಕಾರಣಿಯಾಗಿ ಹಲವು ಕ್ಷೇತ್ರಗಳ ಸಂಬಂಧ ಹೊಂದಿರುವ ಬಿ.ಸಿ.ಪಾಟೀಲರು ತಮ್ಮ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ವಿವಿಧ ಸಾಹಿತಿಗಳು ರಚಿಸಿರುವ ಸುಮಧುರ ಗೀತೆಗಳನ್ನೊಳಗೊಂಡಿರುವ ಈ ಚಿತ್ರಕ್ಕೆ ಸಾಯಿ ಕಾರ್ತಿಕ್ ಅವರ ಸಂಗೀತವಿದೆ. ನಿರಂಜನ ಬಾಬು ಛಾಯಾಗ್ರಹಣ, ರವಿವರ್ಮ ಸಾಹಸ, ಕೆ.ವಿ.ಮಂಜುನಾಥ ರೆಡ್ಡಿ, ಶಂಕರ್ ಸಹ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಬಿ.ಸಿ.ಪಾಟೀಲ್, ಅಶ್ವಿನಿ, ಬಿ.ವಿ.ರಾಧ, ಶೋಭರಾಜ್, ಪ್ರಕಾಶ್, ಸತ್ಯಜಿತ್, ಹರೀಶ್ ರಾಯ್, ಅಶೋಕ್ ಖೇಣಿ, ಲಕ್ಷ್ಮಣ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











