ಚಿಂಗಾರಿ 'ಸತ್ಯ'ಕಥೆ ಹೇಳಿದ ಚಾಲೆಂಜಿಂಗ್ ಸ್ಟಾರ್
ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರ ಚಿಂಗಾರಿಯ 'ಸಂತೋಷಕೂಟ' ಹೊಟೆಲ್ ಗೋಲ್ಡ್ ಪಿಂಚ್ ನಲ್ಲಿ ನೆರವೇರಿತು. ದರ್ಶನ್ ಹಾಗೂ ಇಡೀ ಚಿತ್ರತಂಡ ಈ ಕೂಟದಲ್ಲಿ ಭಾಗಿಯಾಗಿತ್ತು. ಎಲ್ಲರ ಮುಖದಲ್ಲಿ ಸಂತೋಷ, ಸಂಭ್ರಮ ಮನೆಮಾಡಿತ್ತು. ಚಿತ್ರ ಯಶಸ್ವಿಯಾಗಿದೆ ಎಂಬುದನ್ನು ವಿತರಕ 'ಸಮರ್ಥ್ ವೆಂಚರ್' ನ ಪ್ರಸನ್ನ, ಖುಷಿಯಿಂದ ಘೋಷಿಸಿದರು.
ಮಹದೇವ್ ಹಾಗೂ ಅವರ ಮಗ ಮನು ಗೌಡ ಈ ಚಿತ್ರ ನಿರ್ಮಾಣ ಮಾಡಿ, ನಂತರ ಸೇಲ್ ಮಾಡಿದ್ದಾರೆ. ಅವರಿಗೆ ಸಾಕಷ್ಟು ಲಾಭವಾಗಿದೆ. ಇದೀಗ ಚಿತ್ರ ಖರೀದಿಸಿರುವ ವಿತರಕ ಪ್ರಸನ್ನ ಕೂಡ ಲಾಭ ಗಳಿಸಿರುವುದು ಪಕ್ಕಾ ಆಗಿದೆ. ಮೊದಲ ವಾರವೇ 7 ಕೋಟಿ ಸಮೀಪದ ಕಲೆಕ್ಷನ್ ಆಗಿದ್ದು ಈಗ ಹಾಕಿರುವ ಹಣ ವಾಪಸ್ ಆಗಿ ಲಾಭ ಬಂದಿದೆ ಎಂದಿದ್ದಾರೆ ಪ್ರಸನ್ನ. ರಾಜ್ಯಾದ್ಯಂತ ಒಟ್ಟೂ 140 ಚಿತ್ರಮಂದಿರಗಳಲ್ಲಿ ಚಿಂಗಾರಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಚಿತ್ರದ ನಟ-ನಟಿಯರಾದ ದರ್ಶನ್, ದೀಪಿಕಾ ಕಾಮಯ್ಯ, ಭಾವನಾ, ಯಶಸ್ ಸೂರ್ಯ, ಮಧು, ಪ್ರದೀಪ್, ಅರುಣ್ ಸಾಗರ್, ಹಾಗೂ ತೇಜು ಸಂತೋಷಕೂಟದಲ್ಲಿ ಹಾಜರಿದ್ದರು. ಚಿಂಗಾರಿಯ ಕ್ಯಾಮರಾಮನ್ ವೇಣುರ ತಾರಾಪತ್ನಿ 'ತಾರಾ' ಆಗಮಿಸಿ ಸಂತೋಷದಲ್ಲಿ ಭಾಗಿಯಾದರು. ಇಡೀ ಚಿತ್ರತಂಡ ಒಗ್ಗಾಟನ್ನು ಪ್ರದರ್ಶಿಸಿ ಮಾದರಿ ಎನಿಸಿತು. ಕೋರಿಯೋಗ್ರಾಫರ್ ಆಗಿ ಪ್ರಸಿದ್ಧರಾಗಿದ್ದ ಎ ಹರ್ಷ, ಚಿಂಗಾರಿ ಚಿತ್ರದ ಮೂಲಕ ಯಶಸ್ವಿ ನಿರ್ದೆಶಕ ಪಟ್ಟಕ್ಕೇರಿದರು.
ಇಲ್ಲಿಯವರೆಗಿನ ಬಾಕ್ಸ್ ಆಫೀಸ್ ಗಳಿಕೆಯನ್ನು ಶೀಘ್ರವೇ ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗುವುದೆಂಬ ಮಾತು ವಿತರಕರಿಂದ ಬಂತು. ಆಶ್ಚರ್ಯವೆಂದರೆ ಚಿಂಗಾರಿ ಚಿತ್ರದ ಕಥೆಯನ್ನು ಹಾಲಿವುಡ್ ಚಿತ್ರ 'ಟೇಕನ್'ನಿಂದ ತೆಗೆದುಕೊಳ್ಳಲಾಗಿದೆ ಎಂಬ ಮಾತನ್ನು ಸ್ವತಃ ದರ್ಶನ್ ಘೋಷಸಿದರು. ಅವರ ಮಾತನ್ನು ನಿರ್ದೇಶಕ ಹರ್ಷ ಅನುಮೋದಿಸಿದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ವರ್ಷದ ಪ್ರಾರಂಭದಲ್ಲಿ ಚಿಂಗಾರಿ ಚಿತ್ರದ ಮೂಲಕ ಯಶಸ್ಸು ಕಂಡಿದೆ.


Click it and Unblock the Notifications











