ನೆರೆ ಸಂತ್ರಸ್ತರ ನಿಧಿಗೆ ಚೆಕ್ ಸಮರ್ಪಿಸಿದ ವಿಷ್ಣು
ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ದಂಪತಿಗಳು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಹಣ ಮತ್ತು ಬಟ್ಟೆಗಳನ್ನ್ನುಜಯನಗರ ಟಿ ಬ್ಲಾಕ್ ನ ತಮ್ಮ ನಿವಾಸದಲ್ಲಿ ಸ್ಥಳೀಯ ಶಾಸಕ ಬಿ ಎನ್ ವಿಜಯಕುಮಾರ್ ಅವರಿಗೆ ಬುಧವಾರ ಹಸ್ತಾಂತರಿಸಿದರು. ಅಕ್ಟೋಬರ್ 11ರಂದು 'ಸ್ನೇಹಲೋಕ' ತಂಡಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಪಾದಯಾತ್ರೆ ಮೂಲಕ ಈ ನಿಧಿ ಸಂಗ್ರಹಿಸಿತ್ತು.
ಚೆಕ್ ರೂಪದಲ್ಲಿ ಹಣವನ್ನು ವಿತರಿಸಿದ ಬಳಿಕ ಮಾತನಾಡಿದ ವಿಷ್ಣು, ಎಷ್ಟು ಹಣ ಕೊಟ್ಟಿದ್ದೇವೆ ಎಂಬುದು ಮುಖ್ಯವಲ್ಲ ಎಂದರು. ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಜಯನಗರದ ಜನ ತೋರಿದ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹಾಗೆಯೇ ಸ್ನೇಹಲೋಕ ತಂಡದಕಾರ್ಯವನ್ನು ಶ್ಲಾಘಿಸಿದರು. ನಮ್ಮ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಇದೊಂದು ಅಳಿಲು ಸೇವೆ ಎಂದು ವಿಷ್ಣು ಹೇಳಿದರು.
ಭಾರತಿ ವಿಷ್ಣುವರ್ಧನ್ ಸಹ ನೆರೆ ಸಂತ್ರಸ್ತರಿಗೆ ನೆರವಾಗಲು ಜನ ಮುಂದೆ ಬಂದಿದ್ದನ್ನ್ನು ಸ್ಮರಿಸಿದರು. ಜಯನಗರದಲ್ಲಿ ತಾವು ಪಾದಯಾತ್ರೆ ಮಾಡಿದಾಗ ಸಣ್ಣ ಗೂಡಂಗಡಿಯಿಂದ ಹಿಡಿದು ದೊಡ್ಡ ವ್ಯಾಪಾರಿ ಮಳಿಗೆಗಳು ಮುಂದೆ ಬಂದವು. ನೆರೆ ಸಂತ್ರಸ್ತರಿಗಾಗಿ ಸಹಾಯ ಹಸ್ತ ಚಾಚಿದ ಜಯನಗರದ ಪ್ರಜ್ಞಾವಂತ ನಾಗರೀಕರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.
ಡಾ.ವಿಷ್ಣುವರ್ಧನ್ ಅವರ ನಿವಾಸದಲ್ಲಿ ನಟರಾದ ಅವಿನಾಶ್, ಶೋಭಾರಾಜ್, ಶಿವರಾಂ, ಅನಿರುದ್ಧ್, ದಕ್ಷಿಣ ವಿಭಾಗದ ಡಿಸಿಪಿ ಬಿಎನ್ ರೆಡ್ಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಆರ್ ಜಿ ವಿಜಯಸಾರಥಿ ಸಹ ನೆರ ಸಂತ್ರಸ್ತರಿಗೆ ರು.10,000 ಪರಿಹಾರ ಚೆಕ್ ಕೊಟ್ಟರು. ಶ್ರೀರಾಘವೇಂದ್ರ ಚಿತ್ರವಾಣಿಯ ಡಿ.ಜಿ.ವೆಂಕಟೇಶ್ ಮತ್ತು ಡಿ.ಎಸ್.ಸುನಿಲ್ ನೆರೆ ಸಂತ್ರಸ್ತರ ರು.5,000 ಸಮರ್ಪಿಸಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











