ಚಿತ್ರದುರ್ಗದಲ್ಲಿ ಕೃಷ್ಣನ ಲೀಲೆಗಳನ್ನು ತೆರೆದಿಟ್ಟ ಶಶಾಂಕ್
'ಕೃಷ್ಣನ್ ಲವ್ ಸ್ಟೋರಿ' ಚಿತ್ರ ಇದೇ ಶುಕ್ರವಾರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಚಿತ್ರ ನಿರ್ದೇಶಕ ಶಶಾಂಕ್ ತಮ್ಮ ಚಿತ್ರದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿನ ತಾಜಾ ಕಥೆ ಪ್ರೇಕ್ಷಕರ ಮನಗೆಲ್ಲುತ್ತದೆ ಎಂದಿದ್ದಾರೆ. ಗೆಳೆಯನೊಬ್ಬನ ನೈಜ ಕತೆಯಿದು ಎನ್ನುತ್ತಾರೆ ಶಶಾಂಕ್.
ಚಿತ್ರದ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಚಿತ್ರದ ಶೇ.75ರಷ್ಟು ಕತೆ ನಿಜವಾಗಿ ನಡೆದದ್ದು. ಉಳಿದ ಭಾಗ ಸಿನಿಮಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ್ದೇವೆ ಎಂದರು. ಚಿತ್ರದುರ್ಗದವರೇ ಆದ ಶಶಾಂಕ್ ಈ ಚಿತ್ರವನ್ನು ತೆಗೆಯಲು ಬರೋಬ್ಬರಿ ಒಂದು ವರ್ಷ ಸಮಯ ತೆಗೆದುಕೊಂಡಿದ್ದಾರೆ.
'ಸಿಕ್ಸರ್' ಹಾಗೂ 'ಮೊಗ್ಗಿನ ಮನಸು' ಬಳಿಕ ಶಶಾಂಕ್ ನಿರ್ದೇಶನದಲ್ಲಿ ಬರುತ್ತಿರುವ ಮೂರನೇ ಚಿತ್ರವಿದು. ಮೊದಲ ಎರಡು ಚಿತ್ರಗಳಲ್ಲಿ ಸಾಮಾಜಿಕ ಸಂದೇಶವಿದ್ದರೆ 'ಕೃಷ್ಣನ್ ಲವ್ ಸ್ಟೋರಿ' ಸಂಪೂರ್ಣ ಹಾಸ್ಯ ಪ್ರಧಾನ ಚಿತ್ರ ಎಂದು ಶಶಾಂಕ್ ವಿವರ ನೀಡಿದರು.
'ಎಕ್ಸ್ ಕ್ಯೂಸ್ ಮಿ' ಸೇರಿದಂತೆ ಹತ್ತು ಚಿತ್ರಗಳಲ್ಲಿ ಅಭಿನಯಿಸಿರುವ ಚಿತ್ರದ ನಾಯಕ ನಟ ಅಜಯ್ ರಾವ್ ಸಹ 'ಕೃಷ್ಣನ್ ಲವ್ ಸ್ಟೋರಿ' ಬಗ್ಗೆ ಅಪಾರ ವಿಶ್ವಾಸವನ್ನು ವ್ಯಕ್ತಪಡಿಸಿದರು. 'ಮುಸ್ಸಂಜೆ ಮಾತು' ಖ್ಯಾತಿಯ ಸಂಗೀತ ನಿರ್ದೇಶಕ ಶ್ರಿಧರ್ ಸಂಭ್ರಮ್ ಮಾತನಾಡುತ್ತಾ, ಚಿತ್ರದ ಸಾಹಿತ್ಯ ವಿಭಿನ್ನ ಸಂಗೀತ ಸಂಯೋಜನೆಗೆ ಪ್ರೇರಣೆ ನೀಡಿತು. ಹಾಗಾಗಿ ಚಿತ್ರದಲ್ಲಿ ವಿವಿಧ ರೀತಿಯ ಸಂಗೀತ ವಾದ್ಯಗಳನ್ನು ಬಳಸಲಾಗಿದೆ ಎಂದರು.


Click it and Unblock the Notifications











