ಕೇರಳ ಮಾತೃಭೂಮಿಯಲ್ಲಿ ಪುನೀತ್ 'ಪೃಥ್ವಿ' ಕಂಪನ
ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಮಲಯಾಳಂನಲ್ಲಿ ಪ್ರಶಂಸೆಗೆ ಒಳಗಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ' ಚಿತ್ರ ಕೇರಳದಲ್ಲಿ ಹೊಸ ಕಂಪನಗಳನ್ನು ಎಬ್ಬಿಸಿದೆ. ಪ್ರಚಲಿತ ರಾಜಕೀಯ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಬಳ್ಳಾರಿ ರಾಜಕೀಯ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಹೆಣೆಯಲಾದ ಚಿತ್ರ ಇದಾಗಿದೆ.
ಕೇರಳದ "ಮಾತೃಭೂಮಿ" ದೈನಿಕ ಪತ್ರಿಕೆ ಪೃಥ್ವಿ ಚಿತ್ರದ ಬಗ್ಗೆ ಹತ್ತು ಪುಟಗಳಷ್ಟು ಸುದೀರ್ಘ ಲೇಖನವನ್ನು ಪ್ರಕಟಿಸಿದೆ. ತಮ್ಮದೇ ಸ್ವಂತ ನಿರ್ಮಾಣದ 'ಒರು ವಡಕ್ಕನ್ ವೀರಗಾಥ' ಚಿತ್ರದ ಬಗ್ಗೆ ಕೇವಲ ಮೂರು ಪುಟಗಳಷ್ಟು ಲೇಖನವನ್ನು ಬರೆದು ಅಚ್ಚರಿ ಮೂಡಿಸಿದೆ. ಕೇರಳದ ಹಲವು ನಿರ್ದೇಶಕರು 'ಪೃಥ್ವಿ 'ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.
ಚಿತ್ರ ನಿರ್ದೇಶಕ ಜಾಕಬ್ ವರ್ಗೀಸ್ ಅವರನ್ನು ಭೇಟಿ ಮಾಡುವ ಇಂಗಿತವನ್ನು ಕೇರಳ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದಕ್ಕೆ ಈ ಮಟ್ಟದ ಪ್ರಶಂಸೆ ವ್ಯಕ್ತವಾಗುತ್ತಿರುವುದು ನಿಜಕ್ಕೂ ಮೆಚ್ಚತಕ್ಕ ಸಂಗತಿ. ವಿಧಾನಸೌಧದಲ್ಲಿ ಅಕ್ರಮ ಗಣಿಕಾರಿಕೆ ಬಗ್ಗೆ ಚರ್ಚೆ ಕಾವೇರುತ್ತಿರುವ ಹೊತ್ತಿನಲ್ಲೆ ಕಾಕತಾಳೀಯವೆಂಬಂತ್ಗೆ 'ಪೃಥ್ವಿ ' ಚಿತ್ರ ಪ್ರಶಂಸೆಗೆ ಒಳಗಾಗಿದೆ.


Click it and Unblock the Notifications











