ಸೆ.17ರ ವಿಷ್ಣು ಸಿಂಹಾವಲೋಕನದಲ್ಲಿ ಬದಲಾವಣೆ
ಸಾಹಸಸಿಂಹ ವಿಷ್ಣುವರ್ಧನ್ ನೆನಪಿನಲ್ಲಿ ನಡೆಯುತ್ತಿರುವ ವಿಷ್ಣು ಚಿತ್ರೋತ್ಸವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸೆಪ್ಟೆಂಬರ್ 17ರಿಂದ ಸೆಪ್ಟೆಂಬರ್ 19ರವರೆಗೆ ವಿಷ್ಣು ಚಿತ್ರೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಚಿತ್ರೋತ್ಸವವನ್ನು ಐನಾಕ್ಸ್, ಗರುಡಾ ಮಾಲ್ ನಂತಹ ಪ್ರದೇಶಗಳಲ್ಲಿ ನಡೆಸುವುದರಿಂದ ಸಾಮಾನ್ಯ ಜನಕ್ಕೆ ಚಿತ್ರಗಳು ತಲುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ಬದಲಾವಣೆಗಳನ್ನು ಮಾಡಲಾಗಿದೆ.
ವಿಷ್ಣು ಚಿತ್ರೋತ್ಸವ ಕುರಿತು ಸಿದ್ಧತೆಗಳನ್ನು ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಕನ್ನಡ ಚಿತ್ರೋದ್ಯಮದಹೃದಯ ಭಾಗ ಗಾಂಧಿನಗರದಲ್ಲಿ ಚಿತ್ರೋತ್ಸವವನ್ನು ಆಚರಿಸುವುದು ಸೂಕ್ತ ಎಂಬ ಸಲಹೆಗಳು ಕೇಳಿಬಂದಿದ್ದವು. ಈ ಮಾತಿಗೆ ಭಾರತಿ ವಿಷ್ಣುವರ್ಧನ್, ಹಿರಿಯ ನಟ ಶಿವರಾಂ ಹಾಗೂ ಅನಿರುದ್ಧ್ ಸಹ ಧ್ವನಿಗೂಡಿಸಿದ್ದರು.
ವಿಷ್ಣು ಚಿತ್ರೋತ್ಸವದಲ್ಲಾದ ಬದಲಾವಣೆಗಳು ಹೀಗಿವೆ...ಕಪಾಲಿ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 17ರ ಸಂಜೆ 7.30ಕ್ಕೆ 'ಭೂತಯ್ಯನ ಮಗ ಅಯ್ಯು'; ಸೆಪ್ಟೆಂಬರ್ 18ರ ಸಂಜೆ 7.30ಕ್ಕೆ 'ನಾಗರಹಾವು' ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರಸನ್ನ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 18ರ ಸಂಜೆ 7.30ಕ್ಕೆ 'ಬಂಧನ' ಚಿತ್ರ ಪ್ರದರ್ಶಿಸಲಾಗುತ್ತದೆ.
ಪ್ರದರ್ಶನದ ದಿನದಂತೆ ಕಪಾಲಿ ಹಾಗೂ ಪ್ರಸನ್ನ ಚಿತ್ರಮಂದಿರಗಳಲ್ಲಿ ಉಚಿತ ಪಾಸುಗಳನ್ನು ನೀಡಲಾಗುತ್ತದೆ. ಒಬ್ಬರಿಗೆ ಒಂದು ಪಾಸು ಮಾತ್ರ. ಮೊದಲು ಬಂದವರಿಗೆ ಮೊದಲ ಆದ್ಯತೆ. ಸೆಪ್ಟೆಂಬರ್ 14ರಿಂದ ಐನಾಕ್ಸ್ ಚಿತ್ರಮಂದಿರದಲ್ಲಿ ಉಚಿತ ಪಾಸುಗಳನ್ನು ನೀಡಲಾಗುತ್ತಿದೆ. ವಿಷ್ಣು ಚಿತ್ರೋತ್ಸವ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಪುಟ ಕ್ಲಿಕ್ಕಿಸಿ!


Click it and Unblock the Notifications











