ಕನ್ನಡದ ಕಿರಣ್ ಬೇಡಿ ಈಗ ಆಂಧ್ರ ಕಿರಣ್ ಬೇಡಿ!
'ಕನ್ನಡದ ಕಿರಣ್ ಬೇಡಿ' ಮಾಲಾಶ್ರೀ ಆಂಧ್ರಗೆ ಹೋಗಿದ್ದಾರೆ. ತೊಂಬತ್ತರ ದಶಕದಲ್ಲಿ ಮಾಲಾಶ್ರೀ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತೆಲುಗಿನ ಪ್ರೇಮ ಖೈದಿ ಮತ್ತು ಭಾವ ಭಾವಮರ್ದಿ ಚಿತ್ರಗಳಲ್ಲಿನ ಅವರ ಅಮೋಘ ನಟನೆಯನ್ನು ತೆಲುಗು ಚಿತ್ರ ಪ್ರೇಕ್ಷಕರು ಇನ್ನೂ ಮರೆತಿಲ್ಲ. ಕಾರಣಾಂತರಗಳಿಂದ ತೆಲುಗು ಚಿತ್ರರಂಗದಿಂದ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದರು.
ಸುದೀರ್ಘ ಹತ್ತು ವರ್ಷಗಳ ನಂತರ ಮಾಲಾಶ್ರೀ ಈಗ 'ಆಂಧ್ರ ಕಿರಣ್ ಬೇಡಿ'ಯಾಗಿ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶಿಸಿದ ಕನ್ನಡ ಕಿರಣ್ ಬೇಡಿಯನ್ನು ತೆಲುಗಿಗೆ ಡಬ್ ಮಾಡಲಾಗಿದೆ. ಈಗ ಚಿತ್ರ ಆಂಧ್ರದಲ್ಲಿ ಬಿಡುಗಡೆಗೆ ಅಣಿಯಾಗಿದೆ.
ಈ ಕುರಿತು ಮಾತನಾಡಿದ ಮಾಲಾಶ್ರೀ, ತೆಲುಗು ಪ್ರೇಕ್ಷಕರಿಗೆ ಆದರ್ಶ ನಾಯಕಿಯಾಗಿ, ಅನುರಾಗ ಮೂರ್ತಿಯಾಗಿ ನಾನು ಪರಿಚಿತ. ಆದರೆ ಕನ್ನಡಿಗರಿಗೆ ನಾನು ಆಕ್ಷನ್ ನಟಿಯಾಗಿ ಚಿರಪರಿಚಿತ. ಕುತೂಹಲಭರಿತ ಪಾತ್ರ ಸಿಕ್ಕರೆ ಈಗಲೂ ನಾನು ತೆಲುಗಿನಲ್ಲಿ ನಟಿಸಲು ಸಿದ್ಧ. ಏನೇ ಆಗಲಿ ಹತ್ತು ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರದಲ್ಲಿ ಕಾಣಿಸುತ್ತಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











