ಗಿರಿಕನ್ಯೆ ಪರ ಶ್ರಿಯಾ ವಕಾಲತ್ತು; ಶರಣಂ ಅಯ್ಯಪ್ಪ
ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಅಯ್ಯಪ್ಪ ಸ್ವಾಮಿ ಪಾದಸ್ಪರ್ಶ ಮಾಡುವ ಮೂಲಕ ಕನ್ನಡದ ನಟಿ ಗಿರಿಕನ್ಯೆ ಜಯಮಾಲಾ ಹೊಸ ವಿವಾದಕ್ಕೆ ನಾಂದಿ ಹಾಡಿದ್ದರು. 1987ರಲ್ಲಿ ತಾವು ದೇಗುಲದ ಗರ್ಭಗುಡಿ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ಪಾದ ಸ್ಪರ್ಶ ಮಾಡಿದ್ದಾಗಿ ಜಯಮಾಲಾ ಅವರು 2006ರಲ್ಲಿ ಅಷ್ಟಮಂಗಲ ಪ್ರಶ್ನೋತ್ತರ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದರು.
ಈ ಘಟನೆ ನಡೆದು ಸರಿಸುಮಾರು ಎರಡು ದಶಕಗಳೇ ಕಳೆಯುತ್ತಿದ್ದರೂ ಜಯಮಾಲಾ ಪರ ಯಾವೊಬ್ಬ ನಟಿಯೂ ಧ್ವನಿಯೆತ್ತಿರಲಿಲ್ಲ. ಈಗ ತಮಿಳು, ತೆಲುಗು ಚಿತ್ರರಂಗದ ಜನಪ್ರಿಯ ನಟಿ ಶ್ರಿಯಾ, ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಹೋದರೆ ತಪ್ಪೇನು ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಜಯಮಾಲಾ ಅವರು ಮಾಡಿದ್ದರಲ್ಲಿ ತಪ್ಪೇನು ಇಲ್ಲ. ಅವರ ನಿಲುವನ್ನು ತಾವು ಸಮರ್ಥಿಸುತ್ತಿರುವುದಾಗಿ ಶ್ರಿಯಾ ಹೇಳಿದ್ದಾರೆ. ಜಯಮಾಲಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ಜರೂರತ್ತಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಇದೊಂದು ಅತಾರ್ಕಿಕ ಹಾಗೂ ಒಪ್ಪಲಾಗದ ವಾದವಾಗಿದೆ ಎಂದಿದ್ದಾರೆ ಶ್ರಿಯಾ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿ ಪ್ರವೇಶಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ಬಗ್ಗೆ ಶ್ರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಶಬರಿಮಲೆ ಅಯ್ಯಪ್ಪ ಮಂದಿರ ಪ್ರವೇಶಿಸಿದ್ದಕ್ಕಾಗಿ ಜಯಮಾಲಾ ಹಾಗೂ ಮತ್ತಿಬ್ಬರ ವಿರುದ್ಧ ಈಗಾಗಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿರುವುದು ಗೊತ್ತೇ ಇದೆ.


Click it and Unblock the Notifications











