'ನೂರು ಜನ್ಮಕು' ಪತ್ರಿಕಾಗೋಷ್ಠಿಗೆ ಐಂದ್ರಿತಾ ಇಲ್ಲ
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ನೂರು ಜನ್ಮಕು' ಚಿತ್ರದ ಪತ್ರಿಕಾಗೋಷ್ಠಿಯನ್ನು ಗುರುವಾರ (ಡಿ.17) ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಬಳಿ ಇರುವ ಬೆಲ್ ಹೋಟೆಲ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ. ಆದರೆ ಈ ಪತ್ರಿಕಾಗೋಷ್ಠಿಗೆ ಚಿತ್ರದ ನಾಯಕಿ ಐಂದ್ರಿತಾ ರೇ ಬರುತ್ತಿಲ್ಲ.
'ನೂರು ಜನ್ಮಕು' ಚಿತ್ರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿ ಇದಾಗಿದ್ದು 'ಕಪಾಳಮೋಕ್ಷ' ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಮಧ್ಯಪ್ರವೇಶಿಸಿ ಐಂದ್ರಿತಾ ಮತ್ತು ನಾಗತಿಹಳ್ಳಿ 'ಕಪಾಳಮೋಕ್ಷ' ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದು ಗೊತ್ತೆ ಇದೆ.
ಇದೀಗ ಸಮಸ್ಯೆಯಲ್ಲಾ ಬಗೆಹರಿದಿದ್ದು ಮತ್ತೆ ಅದನ್ನು ಕೆದಕುವ ಉದ್ದೇಶ ಇಲ್ಲ. ಇನ್ನೇನಿದ್ದರೂ ಚಿತ್ರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯಲಿದೆ ಎನ್ನುತ್ತವೆ 'ನೂರು ಜನ್ಮಕು' ಚಿತ್ರತಂಡ ಮೂಲಗಳು. ಕೇವಲ ಐಂದ್ರಿತಾ ರೇ ಅಷ್ಟೇ ಅಲ್ಲ ನಾಯಕ ಸಂತೋಷ್ ಹಾಗೂ ನಿರ್ಮಾಪಕ ವಿನಯ್ ಲಾಡ್ ಸಹ ಪತ್ರಿಕಾಗೋಷ್ಠಿಗೆ ಹಾಜರಾಗುತ್ತಿಲ್ಲ. ನಾಗತಿಹಳ್ಳಿ ಅವರೊಂದಿಗೆ ಇತರೆ ಕಲಾವಿದರು, ತಂತ್ರಜ್ಞರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











