ನಾವು ಮಂಡ್ಯ ಮಂದಿ ಈ ಗಾಂಚಾಲಿನೇ ಬೇಡ ಬಾಸ್
ನಾವು ಮಂಡ್ಯ ಮಂದಿ. ನಮಗೆ ಪ್ರೀತಿಸೋದು ಗೊತ್ತು, ಹೆಚ್ಚುಕಮ್ಮಿ ಮಾತನಾಡಿದರೆ ಹೊಡೆಯುವುದು ಗೊತ್ತು. ಹೀಗೆಂದಿರುವುದು ಬೇರಾರು ಅಲ್ಲ 'ಅಡ್ಡ' ನಿರ್ದೇಶಕ ಪ್ರೇಮ್. ತಮ್ಮ ಚಿತ್ರದ ಬಗ್ಗೆ ಎದ್ದಿರುವ ಹೊಸ ವಿವಾದ ಬಗ್ಗೆ ಅವರು ಸಿಟ್ಟನ್ನು ಹೊರಹಾಕಿದ್ದಾರೆ.
ಅಡ್ಡ ಚಿತ್ರದ ಶೀರ್ಷಿಕೆ ಬದಲಾಯಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಕ್ಯ ಮಂಡಳಿ ಸೂಚಿಸಿತ್ತು. ಅದರಂತೆ ಪ್ರೇಮ್ ತಮ್ಮ ಚಿತ್ರಕ್ಕೆ ಪ್ರೇಮ್ ಅಡ್ಡ ಎಂದು ಹೆಸರಿಟ್ಟಿದ್ದಾರೆ. ಅದರಲ್ಲಿ ಪ್ರೇಮ್ ಎಂಬ ಪದ ಚಿಕ್ಕದಾಗಿದ್ದು ಅಡ್ಡ ದೊಡ್ಡದಾಗಿದೆ. ಈ ಬಗ್ಗೆ ಮಂಡಳಿ ತಕರಾರು ತೆಗೆದಿದಿದೆ. ಎರಡೂ ಪದಗಳ ಅಳತೆಯನ್ನು ಸಮ ಗಾತ್ರದಲ್ಲಿಡುವಂತೆ ಮಂಡಳಿ ಗೌರವ ಕಾರ್ಯದರ್ಶಿ ಸಾ.ರಾ.ಗೋವಿಂದು ಪ್ರೇಮ್ ಪಿಕ್ಚರ್ಸ್ಗೆ ನೋಟೀಸ್ ಜಾರಿ ಮಾಡಿದ್ದಾರೆ.
ಈ ಬಗ್ಗೆ ಕೆಂಡಾಮಂಡಲವಾಗಿರುವ ಪ್ರೇಮ್, ಈ ಹಿಂದೆ ಬಂದ ಸಾಕಷ್ಟು ಚಿತ್ರಗಳಿಗೆ ಇಲ್ಲದ ರೂಲು ನನ್ನ ಚಿತ್ರಕ್ಕೇ ಯಾಕೆ? ವೀರ ಕನ್ನಡಿಗ, ನಮ್ಮ ಬಸವ, ಕನ್ನಡದ ಕಿರಣ್ ಬೇಡಿ, ವೀರ ಮದಕರಿ ಚಿತ್ರಗಳನ್ನು ಹೆಸರಿಸಬಹುದು. ಒಬ್ಬರಿಗೆ ಒಂದೊಂದು ರೂಲಾ ಎಂದು ಪ್ರಶ್ನಿಸಿದ್ದಾರೆ ಪ್ರೇಮ್.
ಕೆಲವು ಚಿತ್ರಗಳಿಗೆ ಫುಲ್ಪೇಜ್ ಜಾಹೀರಾತಿಗೆ ಅವಕಾಶವಿದೆ. ಆದರೆ ನಮ್ಮ ಅಡ್ಡ ಚಿತ್ರಕ್ಕೆ ಮಾತ್ರ ಆ ಅವಕಾಶವಿಲ್ಲ. ಮಂಡಳಿಯಿಂದ ಎನ್ಒಸಿ ತಂದರೆ ಜಾಹೀರಾತಿಗೆ ಅವಕಾಶ. ಆದರೆ ಮಂಡಳಿಯಲ್ಲಿ ಯಾರೂ ಇರೋದಿಲ್ಲ. ಫೋನಿಗೂ ಸಿಗಲ್ಲ. ಯಾರಿಗೇಳೋಣ ನಮ್ಮ ಪ್ರಾಬ್ಲಂ ಎನ್ನುತ್ತಾರೆ ಪ್ರೇಮ್ ಬೇಸರದಿಂದ.
ಚಿತ್ರದ ಶೀರ್ಷಿಕೆ ಹೀಗೆ ಇರಬೇಕು ಎಂಬ ಆಲೋಚನೆ ನಿರ್ದೇಶಕನಿಗಿರುತ್ತದೆ. ಇದನ್ನೂ ಹೀಗೆ ಇಡಬೇಕು ಎಂದು ಮಂಡಳಿ ಮೂಗು ತೂರಿಸುವುದು ಸರಿಯಲ್ಲ. ನಿರ್ದೇಶಕನ ಕ್ರಿಯಾಶೀಲತೆಗೆ ಮಂಡಳಿ ತೊಡರುಗಾಲು ಹಾಕುತ್ತಿದೆ. ನಾವು ಮಂಡ್ಯ ಜನ ಈ ಗಾಂಜಾಲಿನೇ ಬೇಡ ಎನ್ನೋದು ಎಂಬಂತೆ ಪ್ರೇಮ್ ಕೆಂಡಾಮಂಡಲವಾಗಿದ್ದಾರೆ. (ಏಜೆನ್ಸೀಸ್)


Click it and Unblock the Notifications











