ಕನ್ನಡ ಹುಡುಗಿ ಹುಡುಕಾಟದಲ್ಲಿ ನಾಗೇಂದ್ರ ಪ್ರಸಾದ್

ಚಿತ್ರಕ್ಕಾಗಿ ಪ್ರಮುಖ ಭೂಮಿಕೆಯಲ್ಲಿರುವ ನಟರನ್ನು ಆಯ್ಕೆ ಮಾಡಿರುವ ನಾಗೇಂದ್ರ ಪ್ರಸಾದ್ ಅಪ್ಪಟ ಕನ್ನಡ ಮಣ್ಣಿನ ಮುಗ್ಧ ಮೊಗದ ಚೆಲುವೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ನಾಯಕಿಯಾಗಬೇಕಾದವಳು ಕನ್ನಡದವಳೇ ಆಗಿರಬೇಕು, ಸುಂದರವಾಗಿರಬೇಕು, ಮುಗ್ಧೆ ಪಾತ್ರಕ್ಕೆ ಸರಿಹೊಂದುವಂತಿರಬೇಕು ಮತ್ತು ನಟನೆಯ ಗಂಧವಿರಬೇಕು ಎಂಬುದು ನಾಗೇಂದ್ರ ಪ್ರಸಾದ್ ಬೇಡಿಕೆಗಳು.
ಈ ಎಲ್ಲ ಗುಣಗಳಿದ್ದ ಕನ್ನಡದ ಹುಡುಗಿ ನಾಗೇಂದ್ರ ಪ್ರಸಾದ್ ಅವರನ್ನು ಅವರ ಈ-ಮೇಲ್ ವಿಳಾಸ [email protected] ವಿಳಾಸಕ್ಕೆ ನೇರವಾಗಿ ಸಂಪರ್ಕಿಸಬಹುದು. ಜೊತೆಗೆ ತಮ್ಮ ಭಾವಚಿತ್ರಗಳನ್ನು ಕಳಿಸಲು ಮರೆಯಬಾರದು.
ಗಣೇಶನ ಚಿತ್ರಕ್ಕೆ ಸಹಜ ಆಯ್ಕೆಯಂತಿರುವ ವಿಜಯ ರಾಘವೇಂದ್ರ, ನವೀನ್ ಕೃಷ್ಣ, ಶರಣ್, ಗುಂಡ್ರಗೋವಿ ಸತ್ಯ, ಶೋಭರಾಜ್ ಮತ್ತು ಯು2 ಮನೀಷ್ ಗೆಳೆಯರ ಬಳಗ ಸೇರಿಕೊಂಡಿದ್ದಾರೆ. ನಾಯಕಿ ಪಾತ್ರಕ್ಕೆ ಸೂಕ್ತಳಾದ ಹುಡುಗಿ ಸಿಕ್ಕಕೂಡಲೆ ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ಸೆಪ್ಟೆಂಬರ್ 10 ಗೌರಿ ಗಣೇಶ ಹಬ್ಬದಂದು ಚಿತ್ರ ತೆರೆಯ ಮೇಲೆ ತರಬೇಕೆಂಬ ಹವಣಿಕೆಯಲ್ಲಿ ಇದ್ದಾರೆ ನಾಗೇಂದ್ರ ಪ್ರಸಾದ್.
ಜಿಟಿ ಪ್ರೊಡಕ್ಷನ್ಸ್ ನಿಂದ ನಿರ್ಮಾಣವಾಗುತ್ತಿರುವ ಈ ಉದ್ದ ಹೆಸರಿನ ಚಿತ್ರಕ್ಕೆ ನಿರ್ದೇಶನದ ಜೊತೆ ಕಥೆ, ಚಿತ್ರಕಥೆ ಮತ್ತು ಸಾಹಿತ್ಯದ ಜವಾಬ್ದಾರಿಯನ್ನು ವಿ ನಾಗೇಂದ್ರ ಪ್ರಸಾದ್ ಹೊತ್ತಿದ್ದಾರೆ. ಸಂಭಾಷಣೆಯನ್ನು ಮಳವಳ್ಳಿ ಸಾಯಿಕೃಷ್ಣ ಬರೆಯುತ್ತಿದ್ದಾರೆ. ಸಂಗೀತ ವಿ ಹರಿಕೃಷ್ಣ ಅವರದು. ಹೊಸಮನೆ ಮೂರ್ತಿ ಕಲಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಗಣೇಶ ಚತುರ್ಥಿಯಂದು ಗಲ್ಲಿಗಲ್ಲಿಗಳಲ್ಲಿ ಕೂಡಿಸುವ ಗಣೇಶನ ಮೂರ್ತಿ, ಅದಕ್ಕಾಗಿ ಎತ್ತುವ ಪಟ್ಟಿ ಮತ್ತು ಅಲ್ಲಿ ನಡೆಯುವ ಕಾರುಬಾರುಗಳ ಸುತ್ತ ಚಿತ್ರಕಥೆ ಗಿರಕಿ ಹೊಡೆಯುತ್ತದೆ ಅಂತಾರೆ ನಾಗೇಂದ್ರ ಪ್ರಸಾದ್.


Click it and Unblock the Notifications











