ಯೋಗರಾಜ್ ಭಟ್ ಮತ್ತು ದಿಗಂತ್ ಲೈಫು ಇಷ್ಟೇನೆ!
ಲೈಫು ಇಷ್ಟೇನೆ... ಎಂಬುದು ಯೋಗರಾಜ್ ಭಟ್ಟರ 'ಪಂಚರಂಗಿ' ಚಿತ್ರದ ಅಡಿಬರಹ. ಚಿತ್ರದಲ್ಲಿನ "ಲೈಫು ಇಷ್ಟೇನೆ..." ಎಂಬ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಈಗ ಇದೇ ಹೆಸರು ಚಿತ್ರವೊಂದರ ಶೀರ್ಷಿಕೆಯಾಗುತ್ತಿದೆ. ಈ ಚಿತ್ರದ ನಿರ್ಮಾಪಕರು ಬೇರಾರು ಅಲ್ಲ ಭಟ್ ಅಲಿಯಾಸ್ ಯೋಗಾಜ್ ಭಟ್!
ಭಟ್ಟರ ಚಿತ್ರ ಎಂದ ಮೇಲೆ ಗುಳಿ ಕೆನ್ನೆ ಹುಡುಗ ದಿಗಂತ್ಗೆ ಜಾಗ ಇಲ್ಲದಿರುತ್ತದೆಯೇ? 'ಲೈಫು ಇಷ್ಟೇನೆ' ಎಂದು ದಿಗಂತ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 'ಲೈಫು ಇಷ್ಟೇನೆ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪವನ್ ಕುಮಾರ್. ಈ ಹಿಂದೆ ಇವರು ಯೋಗರಾಜ್ ಭಟ್ ಮತ್ತು ಸೂರಿ ಜೊತೆ ಕೆಲಸ ಮಾಡಿದ್ದಾರೆ.
'ಇಂತಿ ನಿನ್ನ ಪ್ರೀತಿಯ', 'ಪಂಚರಂಗಿ' ಹಾಗೂ 'ಮನಸಾರೆ' ಚಿತ್ರಗಳಿಗೆ ಪವನ್ ಕುಮಾರ್ ಕೆಲಸ ಮಾಡಿದ್ದಾರೆ. ಭಟ್ಟರ ಈ ಹಿಂದಿನ ಚಿತ್ರಗಳಿಗಿಂತ ಇದು ಭಿನ್ನವಾಗಿರುತ್ತದೆ. ಚಿತ್ರದಲ್ಲಿ ಸಂಭಾಷಣೆಗಿಂತಲೂ ಹೆಚ್ಚಾಗಿ ಹಾಸ್ಯಕ್ಕೆ ಒತ್ತು ನೀಡಲಾಗಿದೆ. 'ಪಂಚರಂಗಿ' ಚಿತ್ರದ ಬಹುತೇಕ ತಾಂತ್ರಿಕ ಬಳಗ ಇಲ್ಲೂ ಕಾರ್ಯನಿರ್ವಹಿಸಲಿದೆ ಎನ್ನುತ್ತಾರೆ ಪವನ್.
ಮನೋಮೂರ್ತಿ ಸಂಗೀತ, ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ಚಿತ್ರಕ್ಕಿರುತ್ತದೆ. ಚಿತ್ರದ ಶೀರ್ಷಿಕೆ ಕೇಳಿದರೆ ಇದು 'ಪಂಚರಂಗಿ' ಚಿತ್ರದ ಹ್ಯಾಂಗೋವರ್ ಅನ್ನಿಸಬಹುದು. ಆದರೆ 'ಪಂಚರಂಗಿ' ಚಿತ್ರಕ್ಕೂ ಲೈ 'ಫು ಇಷ್ಟೇನೆ' ಚಿತ್ರಕ್ಕೂ ಯಾವುದೇ ವಿಧದಲ್ಲೂ ಸಾಮ್ಯತೆ ಇರುವುದಿಲ್ಲ. ಚಿತ್ರದ ಕಥೆ ಕೇಳಿ ಭಟ್ಟರೇ ಈ ಶೀರ್ಷಿಕೆಯನ್ನು ಸೂಚಿಸಿದ್ದಾಗಿ ಪವನ್ ತಿಳಿಸಿದ್ದಾರೆ.
ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರಗಳನ್ನು ಆಯ್ಕೆ ಮಾಡಬೇಕಾಗಿದೆ. ನಗರದ ಯುವಕನೊಬ್ಬನ ಕತೆ ಇದಾಗಿದೆ. ಈ ಪಾತ್ರಕ್ಕೆ ದಿಗಂತ್ ಮುಖಚಹರೆ ಹೇಳಿ ಮಾಡಿಸಿದಂತಿದೆ, ಹಾಗಾಗಿ ಅವರನ್ನು ಆಯ್ಕೆ ಮಾಡಿದ್ದೇನೆ ಎಂಬುದು ಪವನ್ ವಿವರಣೆ. ಈ ಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಹೊಸ ಲೈಫು ಕೊಡುತ್ತೋ ಇಲ್ಲವೋ ಕಾದು ನೋಡಬೇಕು.


Click it and Unblock the Notifications











