twitter
    For Quick Alerts
    ALLOW NOTIFICATIONS  
    For Daily Alerts

    ದ್ವಾರ್ಕಿಗೆ ಗೆಟ್‌ ಔಟ್ ಎಂದಿದ್ದರು ಸಿದ್ಧಲಿಂಗಯ್ಯ

    By Staff
    |

    *ಜಯಂತಿ

    ಮೇಯರ್ ಮುತ್ತಣ್ಣ, ದ್ವಾರಕೀಶ್ ಹಾಗೂ ಸಿದ್ಧಲಿಂಗಯ್ಯ ಇಬ್ಬರಿಗೂ ಜೀವನ ಕೊಟ್ಟ ಸಿನಿಮಾ. ಈ ಚಿತ್ರದ ಮೂಲಕ ದ್ವಾರಕೀಶ್ ನಿರ್ಮಾಪಕರಾದರೆ, ಸಿದ್ದಲಿಂಗಯ್ಯ ನಿರ್ದೇಶಕನ ಕ್ಯಾಪ್ ಧರಿಸಿದ್ದರು.

    ತನ್ನ ಸಾಮರ್ಥ್ಯದ ಬಗ್ಗೆ ಹಾಗೂ ನಿರ್ದೇಶಕನ ಸ್ವಾತಂತ್ರ್ಯದ ಬಗ್ಗೆ ಸಿದ್ಧಲಿಂಗಯ್ಯನವರಿಗೆ ವಿಪರೀತ ವಿಶ್ವಾಸ, ಅಭಿಮಾನ. ಮುತ್ತಣ್ಣ ಚಿತ್ರದ ಶೂಟಿಂಗ್ ನಡೀತಿತ್ತು. ಒಂದು ದೃಶ್ಯ ನಿರ್ದೇಶಕರಿಗೆ ಸಮಾಧಾನ ತರಲಿಲ್ಲ. ಚೆನ್ನಾಗಿಯೇ ಬಂದಿದೆ, ಷಾಟ್ ಓಕೆ ಮಾಡ್ಬಿಡಿ ಸಾರ್ ಎಂದ್ರು ದ್ವಾರಕೀಶ್. ಅವರು ನಿರ್ಮಾಪಕರು. ಖರ್ಚಾಗುತ್ತಿರುವ ರೀಲಿನ ಕುರಿತ ಭಯ ಅವರದ್ದು. ದ್ವಾರ್ಕಿ ಮಾತು ಕೇಳುತ್ತಿದ್ದಂತೆಯೇ ಸಿದ್ಧಲಿಂಗಯ್ಯ ಕೆಂಡಾಮಂಡಲ. ಗೆಟ್‌ಔಟ್ ಎಂದು ಚೀರಿದರು. ದ್ವಾರ್ಕಿಗೆ ಆಶ್ಚರ್ಯ. ಆದರೆ ಮರುಮಾತಾಡದೆ ಸ್ಥಳದಿಂದ ಅವರು ಹೊರನಡೆದರು. ಚಿತ್ರೀಕರಣ ಮುಂದುವರೆಯಿತು.

    ನಂತರದ್ದೆಲ್ಲ ಇತಿಹಾಸ. ಮೇಯರ್ ಮುತ್ತಣ್ಣ ಸೂಪರ್ ಹಿಟ್. ಮೊದಲ ಪ್ರದರ್ಶನದ ನಂತರ ಸಿದ್ಧಲಿಂಗಯ್ಯನವರನ್ನು ಅಪ್ಪಿಕೊಂಡ ದ್ವಾರಕೀಶ್, ಅದ್ಭುತ ಸಿನಿಮಾ ಮಾಡಿದ್ದೀರಿ ಎಂದು ಕಣ್ಣೀರಾದರಂತೆ. ಅಂದಹಾಗೆ, ಮುತ್ತಣ್ಣನಿಗೆ ಖರ್ಚಾದ ದುಡ್ಡು 2 ಲಕ್ಷ 10 ಸಾವಿರ ರೂಪಾಯಿ.

    ಮತ್ತೊಂದು ಪ್ರಸಂಗ. ಬಂಗಾರದ ಮನುಷ್ಯ ಚಿತ್ರಕ್ಕೆ ಸಂಬಂಧಿಸಿದ್ದು. ಸಿನಿಮಾ ತೆರೆಕಂಡ ಮೊದಲ ದಿನ ಪ್ರೇಕ್ಷಕರ ಪ್ರತಿಕ್ರಿಯೆ ಅಷ್ಟು ಚೆನ್ನಾಗಿರಲಿಲ್ಲ. ರಾಜಕುಮಾರ್ ಸಿನಿಮಾ ಹೌಸ್‌ಫುಲ್ ಆಗಲಿಲ್ಲ ಅಂದ್ರೆ ಏನರ್ಥ?. ಈ ಸಿದ್ಧಲಿಂಗಯ್ಯ ನಿರ್ಮಾಪಕ ಕೆಸಿಎನ್ ಗೌಡರನ್ನು ಮುಳುಗಿಸಿಬಿಟ್ಟ ಎಂದು ಗಾಂಧಿನಗರದ ಜನ ಮಾತನಾಡಿಕೊಂಡರು. ಗೌಡರಿಗೂ ಆತಂಕ. ಇದೇನು ಸ್ವಾಮಿ ಅಂದರು. ಆಗ ಸಿದ್ಧಲಿಂಗಯ್ಯ ಹೇಳಿದ್ದು

    ಅರವತ್ತು ದಿನ ಶೂಟಿಂಗ್ ಮಾಡಿದ್ದೀವಿ. ಒಂದು ದಿನದ ಶೂಟಿಂಗ್ ಖರ್ಚನ್ನು ಸಿನಿಮಾ ತೆರೆಕಂಡ ನಂತರದ ಒಂದು ದಿನದಲ್ಲಿ ನಿರೀಕ್ಷಿಸೋದು ಲೆಕ್ಕಾಚಾರ. ಅದುಬಿಟ್ಟು, ಅಷ್ಟೂ ದಿನಗಳ ಖರ್ಚು ಮೊದಲ ದಿನವೇ ಬರಬೇಕು ಎಂದರೆ ಹೇಗೆ? ಸ್ವಲ್ಪ ತಾಳ್ಮೆಯಿಂದಿರಿ...ಸಿದ್ಧಲಿಂಗಯ್ಯನವರ ಲೆಕ್ಕ ತಪ್ಪಲಿಲ್ಲ. ಎರಡನೇ ದಿನದಿಂದಲೇ ಬಂಗಾರದ ಮನುಷ್ಯನಿಗೆ ಜನ ಮುಗಿಬಿದ್ದರು. ಸ್ಟೇಟ್ಸ್ ಚಿತ್ರಮಂದಿರದಲ್ಲಿ ಸತತ ಎರಡು ವರ್ಷ ಸಿನಿಮಾ ದಾಖಲೆ ಪ್ರದರ್ಶನ ಕಂಡಿತು.

    ಕಳೆದ ವಾರ, ಟೀವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ಧಲಿಂಗಯ್ಯ ಮೇಲಿನ ಎರಡು ಘಟನೆಗಳನ್ನು ನೆನಪಿಸಿಕೊಂಡು ಆರ್ದ್ರರಾದರು. ಕಳೆದ ಎಪ್ಪತ್ತೈದು ವರ್ಷಗಳನ್ನು ಕೆಣಕಿದರೆ ಇಂಥ ಅಮೃತ ಕ್ಷಣಗಳು ನೂರಾರು ಸಿಗುತ್ತವೆ. ಇಂಥ ಕ್ಷಣಗಳೇ ಅಲ್ಲವೇ ಸಂಸ್ಕೃತಿಯನ್ನು ರೂಪಿಸುವುದು!

    ಪೂರಕ ಓದಿಗೆ
    ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ
    ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
    ನಾಯಕ ನಟರಿಗೆ ದ್ವಾರಕೀಶ್ ಛೀಮಾರಿ

    Wednesday, February 18, 2009, 15:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X