ಕೋ ಕೋ ಚಿತ್ರದ ನಿರ್ದೇಶಕರಿಗೆ ಕೋಪ ಯಾಕೆ?
ಕಳೆದ ವಾರ ಬಿಡುಗಡೆಯಾದ ಕೋ ಕೋ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯೇ? ಹೀಗೊಂದು ಪ್ರಶ್ನೆ ಗಾಂಧಿನಗರದಲ್ಲಿ ಎದ್ದಿದೆ. ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಶ್ರೀಹರಿ ನಟನೆಯ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದಾರೆ. ಆದರೆ, ಚಿತ್ರ ನೋಡಿ ಬಂದ ಪ್ರೇಕ್ಷಕ ಮಾತ್ರ ಈ ಚಿತ್ರವನ್ನು ಹಿಂದೆ ಎಲ್ಲೋ ನೋಡಿದ ನೆನಪಿದೆ ಎನ್ನಲು ಪ್ರಾರಂಭಿಸಿದ್ದಾನೆ.
ಇದಕ್ಕೆ ಕಾರಣ ನಿರ್ದೇಶಕ ಚಂದ್ರು ಅವರ ಮೇಕಿಂಗ್ ಎಂದರೂ ತಪ್ಪಾಗತ್ತಾ? ಬಿಡುಗಡೆಯಾದ ಚಿತ್ರದ ಸತ್ಯಾಸತ್ಯತೆಯನ್ನು ಬಿಡಿಸಿ ಪ್ರೇಕ್ಷಕರಿಗೆ ಹೇಳುವುದು ಸಿನಿಮಾ ಪತ್ರಕರ್ತರ ಕೆಲಸ. ಕೋ ಕೋ ಚಿತ್ರದ ವಿಮರ್ಶೆಯನ್ನು ಎಲ್ಲ ಸಿನಿಮಾ ಪರ್ತ್ರಕರ್ತರು ಮಾಡಿ ಮುಗಿಸಿದ್ದಾರೆ.
ಸಿನಿಮಾ ಉದ್ಯಮದ ಆಳ-ಅಗಲವನ್ನು ಬಲ್ಲ ಹಿರಿಯ ಪತ್ರಕರ್ತ ಬಿ. ಗಣಪತಿಯವರು ರಾಜ್ ಮ್ಯೂಸಿಕ್ ಚಾನೆಲ್ನಲ್ಲಿ ವಾರದಲ್ಲಿ ಬಿಡುಗಡೆಗೊಂಡ ಸಿನಿಮಾಗಳ ವಿಮರ್ಶೆಯನ್ನು ಸಿನಿಮಾ ಪ್ಯಾರಡೈಸ್ ಕಾರ್ಯಕ್ರಮದಲ್ಲಿ ಮಾಡಿಕೊಡುತ್ತಾರೆ. ಕೊನೆಯಲ್ಲಿ 100 ರಲ್ಲಿ ಚಿತ್ರಕ್ಕೆ ಎಷ್ಟು ಅಂಕ ಕೊಡಬಹುದು ಎಂದು ತೀರ್ಮಾನಿಸಿ ಅಂಕಗಳನ್ನು ನೀಡುತ್ತಾರೆ ತಾನೆ?
ಕೋ ಕೋ ಸಿನಿಮಾಕ್ಕೆ ಗಣಪತಿ ಕೇವಲ 37 ಅಂಕ ನೀಡಿದ್ದಾರೆ. ಇದರಿಂದ ಸಿಟ್ಟಾದ ಚಂದ್ರು ಅಭಿಮಾನಿಗಳ ಗುಂಪು ರಾಜ್ ಮ್ಯೂಸಿಕ್ ಕಛೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಗಣಪತಿ ಅವರಿಗೆ ಅವಾಜ್ ಹಾಕಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.
ಟಿವಿ ಚಾನೆಲ್ ನುಗ್ಗಿದವರು ನಾಳೆ ಪತ್ರಿಕಾ ಕಛೇರಿಗೂ, ಇಂಟರ್ ನೆಟ್ ಕಚೇರಿಗೂ ನುಗ್ಗಬಹುದು. ಹಾಗಾದರೆ ನಿರ್ದೇಶಕ ಚಂದ್ರು ಸಿನಿಮಾದಲ್ಲಿ ತೋರಿಸಿದಂತೆಯೇ ರೌಡಿಸಂ ಮಾಡಲು ಹೊರಟಿದ್ದಾರೆಯೇ ಎಂದು ಗಾಂಧಿನಗರಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಏನ್ ಕಾಲ ಬಂತಪ್ಪಾ! (ಒನ್ ಇಂಡಿಯಾ ಕನ್ನಡ)


Click it and Unblock the Notifications











