ಬಳ್ಳಾರಿಯಲ್ಲಿ ಮೈಲಾರಿ ಅದ್ದೂರಿ ವಿಜಯೋತ್ಸವ
ಗಡಿನಾಡು ಬಳ್ಳಾರಿಯಲ್ಲಿ 'ಮೈಲಾರಿ' ಚಿತ್ರದ ವಿಜಯೋತ್ಸವ ಸೋಮವಾರ (ಜ.17) ಅದ್ದೂರಿಯಾಗಿ ನಡೆಯಿತು. ಸೋಮವಾರ ಮಧ್ಯಾಹ್ನ 12.30ಕ್ಕೆ ಬಳ್ಳಾರಿಗೆ ಆಗಮಿಸಿದ ಚಿತ್ರದ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾರಾಜ್ ಕುಮಾರ್ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಹೊಸಪೇಟೆಯಿಂದ ಆರಂಭವಾದ ವಿಜಯ ಯಾತ್ರೆ ಬಳ್ಳಾರಿ ಮೂಲಕ ಹಾದು ಸಂಜೆ ವೇಳೆಗೆ ಚಳ್ಳಕೆರೆ ತಲುಪಿತು. ಶಿವಣ್ಣನ ಸಾವಿರಾರು ಅಭಿಮಾನಿಗಳು ಬೈಕ್ ಮತ್ತು ಕಾರುಗಳಲ್ಲಿ ವಿಜಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಸ್ವಂತ ಕಾರು ಹಾಗೂ ಬೈಕ್ಗಳಲ್ಲಿ ಅಭಿಮಾನಿಗಳು ವಿಜಯಯಾತ್ರೆಗೆ ಆಗಮಿಸಿದ್ದದ್ದು ವಿಶೇಷ.
ಈ ಸಂದರ್ಭದಲ್ಲಿ ಶಿವಣ್ಣ ಮಾತನಾಡುತ್ತಾ, ಅಪ್ಪಾಜಿ ಅವರ ಕಾಲದಿಂದಲೂ ಬಳ್ಳಾರಿ ಜೊತೆ ಉತ್ತಮ ಒಡನಾಡವಿದೆ. ಚಿತ್ರ ಗೆದ್ದಾಗಲೆಲ್ಲಾ ನಾನು ಬಳ್ಳಾರಿಗೆ ಆಗಮಿಸಿ ಇಲ್ಲಿನ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಳ್ಳುತ್ತೇನೆ ಎಂದರು. ಅಭಿಮಾನಿಗಳೊಂದಿಗೆ ಕೂತು 'ಮೈಲಾರಿ' ಚಿತ್ರವನ್ನು ಶಿವಣ್ಣ ವೀಕ್ಷಿಸಿದರು.
ಬಳ್ಳಾರಿಯಲ್ಲಿ ಕನ್ನಡ ಚಿತ್ರಗಳಿಗೆ ಉಳಿಗಾಲವಿಲ್ಲ. ಇಲ್ಲಿ ಬರೀ ಪರಭಾಷಾಚಿತ್ರಗಳದ್ದೇ ಹಾವಳಿ ಎಂಬ ಕೂಗಿನ ನಡುವೆಯೂ 'ಮೈಲಾರಿ' ಯಶಸ್ವಿ 25ನೇ ದಿನಕ್ಕೆ ಅಡಿಯಿಟ್ಟಿದ್ದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.
ಬಳ್ಳಾರಿ ಜಿಲ್ಲೆ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕರುನಾಡ ಸೇನೆ ವತಿಯಿಂದ ಬಳ್ಳಾರಿಯ ಪ್ರಮುಖ ಬೀದಿಗಳಲ್ಲಿ 'ಮೈಲಾರಿ' ವಿಜಯಯಾತ್ರೆ ವಿಜೃಂಭಣೆಯಿಂದ ನಡೆಯಿತು. ಕೆಎಂಎಫ್ ಅಧ್ಯಕ್ಷ ಜಿ ಸೋಮಶೇಖರ್ ರೆಡ್ಡಿ ಹಾಗೂ 'ಮೈಲಾರಿ' ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್ ಕೂಡ ಉಪಸ್ಥಿತರಿದ್ದರು. [ಹ್ಯಾಟ್ರಿಕ್ ಹೀರೋ]


Click it and Unblock the Notifications











