ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ, ಪೂಜಾಗಾಂಧಿ
'ಮುಂಗಾರು ಮಳೆ' ಹುಡುಗಿ ಪೂಜಾಗಾಂಧಿ ಬುಧವಾರ(ಜ.18) ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಮೂಲಕ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಇಂದು ಜೆಡಿಎಸ್ ಪಕ್ಷದ ಶಾಲು ಸ್ವೀಕರಿಸಿ, ಪಕ್ಷದ ಬಾವುಟ ಬೀಸಿ ಸದಸ್ಯತ್ವ ಪತ್ರಕ್ಕೆ ಸಹಿ ಹಾಕಿದರು.
ಬಳಿಕ ಪೂಜಾಗಾಂಧಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ರಾಜಕೀಯ ಪ್ರವೇಶಕ್ಕೆ ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರೇ ಸ್ಫೂರ್ತಿ. ನನಗೆ ಪಕ್ಷದ ಸದಸ್ಯತ್ವ ನೀಡಿದ್ದಕ್ಕೆ ಧನ್ಯವಾದಗಳು. ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುತ್ತೇನೆ ಕಂಗ್ಲಿಷ್ನಲ್ಲಿ ಹೇಳಿದರು.
"ನನಗೆ ಅಧಿಕಾರದ ಆಸೆ ಇಲ್ಲ. ಯಾವುದೇ ಕಾರಣಕ್ಕೂ ಚುನಾವಣಾ ಕಣಕ್ಕಿಳಿಯುವುದಿಲ್ಲ. ಈಗಾಗಲೆ ಎಚ್ಐವಿ,ಏಡ್ಸ್ ಬಾಧಿತರರಿಗೆ ನನ್ನಿಂದಾದ ಸೇವೆ ಸಲ್ಲಿಸುತ್ತಿದ್ದೇನೆ. ಈಗ ರಾಜಕೀಯಕ್ಕೆ ಸೇರಿರುವ ಕಾರಣ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ" ಎಂದು ಪೂಜಾಗಾಂಧಿ ಅಭಿಪ್ರಾಯಪಟ್ಟರು.
ಆದರೆ ಈ ಸಂದರ್ಭದಲ್ಲಿ ಕಾರಣಾಂತರಗಳಿಂದ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಅನುಪಸ್ಥಿತರಿದ್ದರು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿರೆಡ್ಡಿ ಹಾಗೂ ಜೆಡಿಎಸ್ ಮುಖಂಡ ಎಂಸಿ ನಾಣಯ್ಯ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಪೂಜಾ ಗಾಂಧಿ ಸೇರ್ಪಡೆಗೊಂಡರು. (ಒನ್ಇಂಡಿಯಾ ಕನ್ನಡ)


Click it and Unblock the Notifications











