ಉಡುಪಿಯಲ್ಲಿ ಸಾಯಿ ಕುಮಾರ್, ಸಾಕ್ಷಿ ಶಿವಾನಂದ್

ಬಹಳ ಸುದೀರ್ಘ ಸಮದ ಬಳಿಕ ಭಕ್ತಿ ಪ್ರಧಾನ ಚಿತ್ರವೊಂದು ಸೆಟ್ಟೇರಿದೆ. ಆಸ್ತಿಕತೆ ಹಾಗೂ ನಾಸ್ತಿಕತೆಯ ನಡುವಿನ ಸಂಘರ್ಷವನ್ನು ಹೇಳುವ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ ಬೆಳ್ತಂಗಡಿಯ ಶರತ್ ಅವರು. ಚಿತ್ರದ ಹೆಸರು 'ನೀನೇನಾ ಭಗವಂತ'. ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಚಿತ್ರ ಸೆಟ್ಟೇರಿದೆ.
ಶ್ರೀಲಕ್ಷ್ಮಿವರ ತೀರ್ಥ ಶ್ರೀಪಾದರು ಚಿತ್ರತಂಡಕ್ಕೆ ಆಶೀರ್ವಚನ ನೀಡಿದರಲ್ಲದೇ ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ದೇಶನವನ್ನೂ ನೀಡಿ ಸುಸೂತ್ರ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಮಂಗಳೂರು ದಕ್ಷಿಣ ವಲಯ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕ್ಯಾಮೆರಾ ಚಾಲನೆ ಮಾಡಿದರೆ, ದರಿಬಾಗಿಲು ಲಕ್ಷ್ಮಣ್ ಕೆ ಆರಂಭ ಫಲಕ ತೋರಿದರು. ಪ್ರೀತಂ ಸಾಗರ್ ಚಿತ್ರದ ನಿರ್ಮಾಪಕರು.
ಬೆಳ್ತಂಗಡಿಯ ಶರತ್ ಅವರು ಕತೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಸುಂದರನಾಥ್ ಸುವರ್ಣ ಛಾಯಾಗ್ರಹಣ ಚಿತ್ರಕ್ಕಿದ್ದು ಗೀತಪ್ರಿಯ, ಶ್ರೀವೇದವ್ಯಾಸ, ಗೌಸ್ಪೀರ್ ಅವರ ಸಾಹಿತ್ಯ ಚಿತ್ರಕ್ಕಿದೆ. ಗಿರಿಧರ್ ದಿವಾನ್ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮೂಡಿಬರುತ್ತಿದೆ.
ಸುದೀರ್ಘ ಸಮಯ ಕನ್ನಡ ಚಿತ್ರಗಳಿಂದ ದೂರ ಸರಿದಿದ್ದ ಸಾಕ್ಷಿ ಶಿವಾನಂದ್ ಈ ಚಿತ್ರದ ಮೂಲಕ ಮತ್ತೆ ಕನ್ನಡ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. ಸಾಯಿ ಪ್ರಕಾಶ್, ಶಂಖನಾದ ಅರವಿಂದ್, ಅಜಯ, ಮಂಡ್ಯ ರಮೇಶ್ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ರಮ್ಯ ತಾಣಗಳಲ್ಲಿ ನೀನೇನಾ ಭಗವಂತ ಚಿತ್ರೀಕರಣ ನಡೆಯಲಿದೆ.
ಸುಮಾರು ಒಂದೂವರೆ ಕೋಟಿ ಬಂಡವಾಳದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಚಿತ್ರದ ನಾಯಕ ನಟ ಡೈಲಾಗ್ ಕಿಂಗ್ ಸಾಯಿ ಕುಮರ್ ಹಾಗೂ ನಾಯಕಿ ಸಾಕ್ಷಿ ಶಿವಾನಂದ್ ಈಗಾಗಲೆ ಉಡುಪಿಗೆ ಆಗಮಿಸಿದ್ದು ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











