ಹೇ ದಾದಾ! ತರ್ಲೆನನ್ಮಗನಿಗೆ ಈಗ ನಲವತ್ತು ವರ್ಷ
ಸಾಕಷ್ಟು ಸೈಕಲ್ ತುಳಿದು, ಗಿಮಿಕ್ ಮಾಡಿ, ತರ್ಲೆ ಮಾಡಿ, ಬುದ್ಧಿ ಖರ್ಚು ಮಾಡಿ, ಇನ್ನೂ ಏನೇನೋ ಮಾಡಿ ಕೊನೆಗೂ ಉಪೇಂದ್ರ ಸ್ಟಾರ್ ಆದರು. ಆಮೇಲೆ ಏನಾದರು ಎಂಬುದು ನಿಮಗೆ ಗೊತ್ತಿದೆ. ಇಂದು(ಸೆ.18) ಉಪೇಂದ್ರರ 40ನೇ ಹುಟ್ಟುಹಬ್ಬ. ಇದೇ ದಿನ ಹುಟ್ಟಿದವರು ; ವಿಷ್ಣುವರ್ಧನ್ ಮತ್ತು ಶ್ರುತಿ.
ಇವರು ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತರಲ್ಲಿ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ಪ್ರತಿಭೆ ಬಳಸಿದ್ದು ಮಾತ್ರ ಅತಿ ಕಡಿಮೆ ಸಲ. ಅಭಿನಯ, ನಿರ್ದೇಶನ, ಸಾಹಿತ್ಯ ರಚನೆ, ಗಾಯನ ಹೀಗೆ ತಮ್ಮ ಪ್ರತಿಭೆಯನ್ನು ಹರಡಿಕೊಂಡು ಕೂತ ಉಪೇಂದ್ರ, 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ಮುಖಾಂತರ ನಿರ್ದೇಶಕರಾಗಿ ಚಿತ್ರರಂಗಕ್ಕೆಕಾಲಿಟ್ಟವರು. 1998ರಲ್ಲಿ ಬಿಡುಗಡೆಯಾದ 'ಎ'ಚಿತ್ರ ಉಪೇಂದ್ರ ಸಿನಿಮಾ ಬದುಕಿಗೆ ದೊಡ್ಡ ತಿರುವು.
ತರ್ಲೆನನ್ಮಗ, ಶ್!, ಓಂ, ಆಪರೇಷನ್ ಅಂತ, ಎ, ಸ್ವಸ್ತಿಕ್ ಚಿತ್ರಗಳು 'ನಿರ್ದೇಶಕ'ಉಪೇಂದ್ರ ಅವರ ಅಸಲಿ ತಾಕತ್ತಿಗೆ ಕನ್ನಡಿ ಹಿಡಿದಿವೆ. 'ನಾಯಕ'ಉಪೇಂದ್ರ ಕನ್ನಡ, ತೆಲುಗು, ತಮಿಳಿನಲ್ಲೂ ಈಗ ಬಿಜಿ. ಉಪೇಂದ್ರ, ಹೆಚ್2ಒ, ಆಟೋ ಶಂಕರ್, ಐಶ್ವರ್ಯ,ರಕ್ತ ಕಣ್ಣೀರು ಚಿತ್ರಗಳಲ್ಲಿ ಗಮನ ಸೆಳೆದಿದ್ದಾರೆ.
ಯಾಕೋ ಉಪ್ಪಿ ಅಭಿಮಾನಿಗಳು ಈಗೀಗ ತುಸು ಮುನಿಸಿಕೊಂಡಿದ್ದಾರೆ. ಬಣ್ಣ ಹಚ್ಚಿಕೊಂಡು ದುಡ್ಡು ಮಾಡೋ ಆತುರದಲ್ಲಿ ನಮ್ ಗುರು ನಿರ್ದೇಶನ ಮರೆತ ಎಂಬ ಆರೋಪ ಅವರದು. ಉಪೇಂದ್ರ ಏನಂತಾರೋ ನೋಡೋಣ.
ಉಪೇಂದ್ರ ಅವರ ಮುಂದಿನ ಚಿತ್ರದ ಹೆಸರು : ಬುದ್ಧಿವಂತ!
ಉಪೇಂದ್ರಗೆ ಶುಭ ಹಾರೈಸಲು, ನಿಮ್ಮ ಮನದಾಳದ ಮಾತುಗಳ ತಲುಪಿಸಲು, ನಿಮ್ಮ ಟೀಕೆ ಟಿಪ್ಪಣಿ ಹಂಚಿಕೊಳ್ಳಲು ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ.


Click it and Unblock the Notifications











