ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!

ಅಮೃತ ಮಹೋತ್ಸವ ಅರ್ಥಪೂರ್ಣವಾಗಿರಬೇಕು, ಅದ್ದೂರಿಯಾಗಿರಬೇಕು ಎನ್ನೋದು ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರ ಹಂಬಲ. ಆ ಕಾರಣದಿಂದಾಗಿಯೇ ಅವರು ಉದ್ಯಮದ ಪ್ರಾತಃಸ್ಮರಣೀಯರಿಗೆ ಸಂಬಂಧಿಸಿದಂತೆ ಎಪ್ಪತ್ತೈದು ಪುಸ್ತಕಗಳ ಮಾಲಿಕೆಯನ್ನು ಮಂಡಳಿ ವತಿಯಿಂದ ಪ್ರಕಟಿಸುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ಈ ಮಾಲಿಕೆಯ ಪ್ರಧಾನ ಸಂಪಾದಕರು. ಇದು ಅರ್ಥಪೂರ್ಣ ಕೆಲಸ.
ಇನ್ನು ಅದ್ಧೂರಿಗೆ ಸಂಬಂಧಿಸಿದ್ದು. ಈಚಿನ ದಿನಗಳಲ್ಲಿ ನಡೆದ ಚಲನಚಿತ್ರ ಕಲಾವಿದರ ಮನರಂಜನೆ ಕಾರ್ಯಕ್ರಮಗಳು ಕಿರುತೆರೆ ಕಾರ್ಯಕ್ರಮಗಳಿಗಿಂತ ಕಳಪೆಯಾಗಿದ್ದ ಉದಾಹರಣೆಗಳಿವೆ. ಅಮೃತ ಮಹೋತ್ಸವದ ಕಾರ್ಯಕ್ರಮ ಹಾಗಾಗಬಾರದು ಎಂದು ಮಂಡಳಿ ಮುನ್ನೆಚ್ಚರಿಕೆ ವಹಿಸಿದೆ. ಜನರ ಗಮನವನ್ನು ಸೆಳೆಯಬೇಕಾದರೆ ಮನರಂಜನೆ ಕಾರ್ಯಕ್ರಮಗಳು ಪೊಗದಸ್ತಾಗಿರಬೇಕು ಎನ್ನುವುದು ಮಂಡಳಿ ಗಮನಕ್ಕೆ ಬಂದಿದೆ. ಆ ಕಾರಣದಿಂದಲೇ ರವಿಚಂದ್ರನ್ ಹೆಗಲಿಗೆ ಮನರಂಜನೆ ಕಾರ್ಯಕ್ರಮಗಳ ಹೊಣೆ ಬಿದ್ದಿದೆ.
ಸದ್ಯಕ್ಕೆ ಕನ್ನಡ ಚಿತ್ರರಂಗದ ಸುಂದರ ಸುಂದರಿಯರೆಲ್ಲ ರವಿ ಕಣ್ಣಳತೆಯಲ್ಲಿ ಗೆಜ್ಜೆ ಕಟ್ಟಿದ್ದಾರೆ, ಹೆಜ್ಜೆ ಹಾಕುತ್ತಿದ್ದಾರೆ. ಅಂದಹಾಗೆ, ರವಿ ಅವರ ಮಂಜಿನ ಹನಿ ಏನಾಯಿತು? ಅದೊಂದು ಮುಗಿಯದ ಕಹಾನಿ. ಕ್ಲೈಮ್ಯಾಕ್ಸ್ ರವಿಗೆ ಇಷ್ಟವಾಗುತ್ತಿಲ್ಲವಂತೆ. ಹಲವು ಸಲ ತಿದ್ದಿದರೂ ಸಮಾಧಾನವಿಲ್ಲ. ಯಾವುದೇ ಕೆಲಸ ಮೊದಲು ನನಗೆ ಇಷ್ಟವಾಗಬೇಕು ಎನ್ನೋದು ಅವರ ಪಾಲಿಸಿ. ಸದ್ಯಕ್ಕೆ ಮಂಜಿನ ಹನಿ ಶೀತಲಗೃಹದಲ್ಲಿದೆ. ರವಿಚಂದ್ರನ್ಗೆ ಯಾವಾಗ ಸ್ಫೂರ್ತಿ ಬರುತ್ತೋ?
(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ
ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಕನ್ನಡ ಚಿತ್ರರಂಗಕ್ಕೆ 15 ದಿನಗಳ ರಜೆ ಬೇಕೆ?


Click it and Unblock the Notifications











